– ರಾಜ್ಯಾದ್ಯಂತ 107 ಕಡೆ ಐಟಿ ದಾಳಿ
– ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ ಬಗ್ಗೆ ಅನುಮಾನ
ಬೆಂಗಳೂರು: 2 ವರ್ಷದ ಬಳಿಕ ರಾಜ್ಯದಲ್ಲಿ ಅತಿ ದೊಡ್ಡ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿದೆ. ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಒಟ್ಟು 107 ಕಡೆ ದಾಳಿಯಾಗಿದೆ.
ರಾಜ್ಯದ 20 ಆಸ್ಪತ್ರೆಗಳು ಸೇರಿ 107 ಕಡೆ ಏಕ ಕಾಲದಲ್ಲಿ ದಾಳಿಯಾಗಿದೆ. ನರ್ಸಿಂಗ್ ಪ್ರವೇಶಾತಿ ಅಕ್ರಮ, ಕೊರೊನಾ ಚಿಕಿತ್ಸೆ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದಿರುವ ಆಕಾಶ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಮೇಲೆ ಐಟಿ ದಾಳಿ ಮಾಡಲಾಗಿದೆ.
- Advertisement 2
- Advertisement 3
ಆಕಾಶ್ ಆಸ್ಪತ್ರೆಯಲ್ಲಿ ಬೆಳಗ್ಗೆ 5:30ಕ್ಕೆ ದಾಳಿ ಮಾಡಿದ್ದು, ಎಂಟು ಇನ್ನೊವಾಕಾರಿನಲ್ಲಿ ಬಂದ25 ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಆಕಾಶ್ ಹಾಸ್ಪಿಟಲ್ ಮಾಲೀಕ ಮುನಿಯಪ್ಪ ಅವರ ಸಹಕಾರನಗರ ಮನೆ, ಕಚೇರಿ ಹಾಗೂ ಮಗ ಅಮರ್ ಮನೆ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
- Advertisement 4
ಮಲ್ಲೇಶ್ವರಂನಲ್ಲಿರುವ ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಮನೆ ಮೇಲೂ ದಾಳಿ ಮಾಡಲಾಗಿದೆ. ಮೊನ್ನೆಯಷ್ಟೆ ಆಕಾಶ್ ಆಸ್ಪತ್ರೆ ಮಾಲೀಕನ ಮಗ ಅಮರ್ ನಿಶ್ಚಿತಾರ್ಥ ನೆರವೇರಿತ್ತು. ಈಗ ಐಟಿ ಬಿಸಿ ಮುಟ್ಟಿದೆ. ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು ಮೇಲೆ ಸಹ ಐಟಿ ದಾಳಿಯಾಗಿದೆ. ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಒಡೆತನದಲ್ಲಿರುವ ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ಲಿಂಗ್ ವಿಚಾರದ ಅನುಮಾನದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಆದಾಯ ತೆರಿಗೆ ವಂಚನೆ ಮಾಡಿರುವ ಆರೋಪದಡಿಯಲ್ಲಿ ಆಸ್ಪತ್ರೆಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.