– ಗ್ರಾಮಸ್ಥರಿಂದ ಗಂಭೀರ ಆರೋಪ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲು ಕಣಿವೆನಾರಾಯಪುರ ಬಳಿಯ ಸರ್ವೆ ನಂಬರ್ 39 ರ ಮಂಜುನಾಥ ಎಂಟರ್ ಪ್ರೈಸರ್ಸ್ ಕಲ್ಲು ಕ್ವಾರಿಯಲ್ಲಿ ಸ್ಪೋಟಕ ವಸ್ತುಗಳಿರುವುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ತಿಳಿದಿದೆ.
ಶಿವಮೊಗ್ಗ ಹುಣಸೋಡು ಗಣಿ ಪ್ರದೇಶದಲ್ಲಾದ ಬ್ಲಾಸ್ಟಿಂಗ್ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕಲ್ಲು ಕ್ವಾರಿಯಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ಸ್ ಪತ್ತೆಯಾಗಿವೆ. ಇನ್ನೂ ಬ್ಲಾಸ್ಟಿಂಗ್ ನಡೆಸಲು ಕ್ವಾರಿಯಲ್ಲಿ ಸಣ್ಣ ಸಣ್ಣ ರಂಧ್ರಗಳನ್ನ ಕೊರೆದು ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ಸ್ ಇಟ್ಟು ಸಿದ್ದತೆ ನಡೆಸಿದ್ದ ದೃಶ್ಯ ಸಹ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಕ್ರಮವಾಗಿ ಪರವಾನಿಗೆ ಪಡೆಯದೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಅಂತ ಸುತ್ತ ಮುತ್ತಲಿನ ಗಣಿಭಾಧಿತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಣಿವೆ ನಾರಾಯಪುರ ಗಣಿ ಪ್ರದೇಶದಲ್ಲಿ ಹತ್ತಾರು ಕಲ್ಲು ಕ್ವಾರಿಗಳಿದ್ದು ಕೆಲವರು ಬ್ಲಾಸ್ಟಿಂಗ್ ನಡೆಸಲು ಅನುಮತಿ ಪಡೆದಿದ್ದಾರೆ ಇನ್ನು ಕೆಲವರು ಪಡೆದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸಕ್ರಮದವರ ನೆರಳಲ್ಲಿ ಅಕ್ರಮವಾಗಿ ಕೆಲವರು ರಾಜಾರೋಷವಾಗಿ ಬ್ಲಾಸ್ಟಿಂಗ್ ನಡೆಸುತ್ತಿದ್ದಾರೆ. ಪ್ರತಿ ದಿನ ಸಂಜೆ 6 ಗಂಟೆಗೆ ಬ್ಲಾಸ್ಟಿಂಗ್ ನಡೆಸುತ್ತಿದ್ದು ಸುತ್ತ ಮುತ್ತಲ ಗ್ರಾಮಗಳ ಜನ ಬ್ಲಾಸ್ಟಿಂಗ್ ಬೆದರುವಂತಾಗಿದೆ.
ಅಕ್ರಮವಾಗಿ ನಡೆಯುತ್ತಿರುವ ಬ್ಲಾಸ್ಟಿಂಗ್ ಎಷ್ಟೇ ಮನವಿ ದೂರುಗಳು ಕೊಟ್ಟರು ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಗಣಿ ಇಲಾಖೆಯವರು ನಮಗೆ ಸ್ಪೋಟಕಗಳು ಸಂಬಂಧಪಡಲ್ಲ ಅಂದ್ರೆ ಪೆÇಲೀಸ್ ಇಲಾಖೆ ಗಣಿ ಇಲಾಖೆಯವರತ್ತ ಬೊಟ್ಟು ಮಾಡುತ್ತಿದ್ದಾರೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಹಾಗೆ ಗಣಿ ಮಾಲೀಕರು ಮಾತ್ರ ರಾಜಾರೋಷವಾಗಿ ಬ್ಲಾಸ್ಟಿಂಗ್ ಮಾಡಿ ಬೆಟ್ಟಗುಡ್ಡಗಳನ್ನು ಕರಗಿಸಿ ನೀರು ಕುಡಿದಷ್ಟೇ ಸಲೀಸಾಗಿ ಪುಡಿ ಪುಡಿ ಮಾಡ್ತಿದ್ದಾರೆ. ಈಗಾಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ತಾರಾ ಕಾದು ನೋಡಬೇಕಿದೆ.