ಮಂಗಳೂರು: ಸರ್ವಧರ್ಮದ ಯುವಕರ ತಂಡವೊಂದು ದುಬೈನಲ್ಲಿ ಮೃತಪಟ್ಟ ಯುವಕನ ವಿಳಾಸವನ್ನು ಪತ್ತೆಹಚ್ಚಿ ಬಳಿಕ ಆತನ ಮೃತದೇಹವನ್ನು ಮಂಗಳೂರಿಗೆ ಕಳುಹಿಸಿದ ಘಟನೆ ನಡೆದಿದೆ.
ನಗರದ ಅಡ್ಡೂರು ನಿವಾಸಿ ಯಶವಂತ ಪೂಜಾರಿ ಕಳೆದ 12 ದಿನಗಳ ಹಿಂದೆ ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೆಲಸಕ್ಕಾಗಿ ದುಬೈಗೆ ಹೋಗಿದ್ದ ಯಶವಂತ ಪೂಜಾರಿಯ ಸೂಕ್ತ ದಾಖಲೆಗಳು ಸಿಗದ ಕಾರಣ ಅವರ ಹುಟ್ಟೂರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.
ಇತ್ತ ಕೊರೊನಾ ಸಮಸ್ಯೆಯಿಂದಾಗಿಯೂ ದುಬೈನಲ್ಲಿ ಲಾಕ್ ಡೌನ್ ಇರೋ ಹಿನ್ನೆಲೆಯಲ್ಲೂ ವಿಳಾಸ ಪತ್ತೆ ಕಷ್ಟಕರವಾಗಿತ್ತು. ಈ ವಿಚಾರವನ್ನು ಅರಿತ ದುಬೈನಲ್ಲಿರುವ ಮಂಗಳೂರು ಮೂಲದ ಎಲ್ಲಾ ಧರ್ಮದ ಯುವಕರು ಮೃತರ ವಿಳಾಸವನ್ನು ಪತ್ತೆಹಚ್ಚಿ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಶನಿವಾರ ದುಬೈನಿಂದ ಕ್ಯಾಲಿಕಟ್ ಗೆ ಏಳು ಗಂಟೆಗೆ ತಲುಪಿದೆ.
ಅಲ್ಲದೇ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೃತದೇಹದ ತರಲು ಅಂಬುಲೆನ್ಸ್ ವ್ಯವಸ್ಥೆ ಕೂಡ ಇದೇ ಯುವಕರ ತಂಡ ಮಾಡಿದೆ. ಭಾನುವಾರ ಮೃತದೇಹ ಮಂಗಳೂರು ತಲುಪಲಿದೆ. ಕರಾವಳಿಯಲ್ಲಿ ಕೋಮುದ್ವೇಷದ ಗಲಭೆಗಳು ಮಾತ್ರ ನಡೆಯೋದಲ್ಲ, ದೂರದ ದುಬೈನಲ್ಲಿರುವ ಇದೇ ಕರಾವಳಿಯ ಯುವಕರು ಸಾಮರಸ್ಯದಿಂದಲೂ ಇದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.