ತುಮಕೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಅಗಲಿಕೆ ಕಲ್ಪತರು ನಾಡು ತಿಪಟೂರಿಗೂ ತೀವ್ರ ನೋವು ತಂದಿದೆ. ಶೈಕ್ಷಣಿಕ ದಿನಗಳಲ್ಲಿ ವಿಜಯ್ ಕಳೆದಿರುವ ನೆನಪುಗಳನ್ನು ಸ್ನೇಹಿತರು ಮೆಲುಕು ಹಾಕಿದ್ದಾರೆ.
ತುಮಕೂರು ಗಡಿಗೆ ಅಂಟಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಪಂಚನಹಳ್ಳಿಯ ಸಂಚಾರಿ ವಿಜಯ್ ಅವರು ಪಿಯು ಶಿಕ್ಷಣವನ್ನು ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಪಡೆದುಕೊಂಡಿದ್ದರು. ಅವರ ಕಾಲೇಜು ದಿನಗಳಲ್ಲಿ ಅತ್ಯಂತ ಕ್ರೀಯಾ ಶೀಲರಾಗಿದ್ದರು. ಇದನ್ನೂ ಓದಿ: ಹೋಟೆಲ್ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್
1999-2002ರವರೆಗೂ ತಿಪಟೂರಿನಲ್ಲಿದ್ದ ವಿಜಯ್ ಇಲ್ಲಿನ ಗೆಳೆಯರಾದ ವಿಜಯ್, ಗಿರೀಶ್, ವಿಜಯ್, ಮನೋಹರ್ ಮತ್ತಿತರ ಸ್ನೇಹಿತರ ಜೊತೆಗೆ ತಮ್ಮ ಹಳೆಯ ಬೈಸಿಕಲ್ನಲ್ಲಿ ಮಾಡಿದ್ದ ಪ್ರವಾಸ ಲೆಕ್ಕಕ್ಕಿಲ್ಲ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆಲ್ಲ ಸೈಕಲ್ ತುಳಿದ ನೆನಪುಗಳನ್ನು ಅವರೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ
ಸೈಕಲ್ ಟೂರ್ನಲ್ಲಿ ತಿಪಟೂರು ಬಿಟ್ಟ ಸೈಕಲ್ ನಿಲ್ಲುತ್ತಿದ್ದದ್ದು ಹಾಸನದಲ್ಲಿಯೆ. ಅಂದಿನ ಮಳೆಯ ನಡುವೆಯೇ ಸಾಕಷ್ಟು ಸಲ ಪ್ರವಾಸದ ಪ್ರಯಾಣವನ್ನು ನೆನೆದು ಭಾವುಕರಾಗುತ್ತಾರೆ ಅವರ ಸ್ನೇಹಿತರು. ಗೆಳೆಯರು ಬೈಕ್ ಖರೀದಿಸಿದಾಗಲೂ ವಿಜಯ್ ಚಿಕ್ಕಮಗಳೂರು, ಮುಳ್ಳಯ್ಯನಗಿರಿ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಸಾಕಷ್ಟು ಸಲ ಹೋಗಿ ಬಂದಿರುವ ನೆನಪುಗಳಿವೆ.
ವಿಜಯ್ ಪಿಯು ಓದುವಾಗಲೇ ಅವರ ಗೆಳೆಯ ತಿಪಟೂರಿನ ಸಚಿನ್ ಮಾರುತಿ 800 ಕಾರು ಇಟ್ಟುಕೊಂಡಿದ್ದರು. ಅದೇ ಕಾರಿನಲ್ಲಿ ವಿಜಯ್ ಆರಂಭದಲ್ಲಿ ಕಾರು ಕಲಿತದ್ದು. ಸದಾ ಪ್ರವಾಸಕ್ಕೆ ಹಾತೊರೆಯುತ್ತಿದ್ದು ಇವರ ಸ್ನೇಹ ಬಳಗ ಇದೇ ಕಾರಿನಲ್ಲಿ ಅದೆಷ್ಟೊ ಸಲ ಹಲವು ಜಾಗಗಳನ್ನು ಸುತ್ತಾಡಿದೆ.
ಪಿಯುಸಿ ನಂತರ ಬಡತನದ ಕಾರಣಕ್ಕೆ ಎರಡು ವರ್ಷ ಓದಿಗೆ ಗುಡ್ಬೈ ಹೇಳಿದ್ದ ಸಂಚಾರಿ ವಿಜಯ್ ನಂತರ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿಗೆ ಪ್ರವೇಶ ಪಡೆದರು. ಬಳಿಕ ಸಿಇಟಿ ಬರೆದು ಎಂಜಿನಿಯರಿಂಗ್ಗೆ ಸೀಟು ಗಿಟ್ಟಿಸಿಕೊಂಡ ಕಾರಣಕ್ಕೆ ತಿಪಟೂರು ಬಿಟ್ಟು ಬೆಂಗಳೂರು ಸೇರಿದರು. ನಂತರ ಅವಕಾಶಗಳು ಸಿಕ್ಕವು, ಪ್ರತಿಭೆಗೆ ಮನ್ನಣೆ ಸಿಕ್ಕಿ ಕೀರ್ತಿ ಪಡೆದರೂ ತಿಪಟೂರು ಜತೆಗೆ ಒಡನಾಟ ಮುಂದುವರಿದಿತ್ತು.
ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಸ್ನೇಹಿತರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಊರಿಗೆ ತೆರಳುವಾಗಲೆಲ್ಲಾ ತಿಪಟೂರು ಗೆಳೆಯರನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದರು. ದೊಡ್ಡ ನಟನಾದರೂ ಹಳೆಯದನ್ನು ಮರೆತಿರಲಿಲ್ಲ. ಅವನ ಸಾವು ನಮಗೆ ನಂಬಲಾಗುತ್ತಿಲ್ಲ ಎಂದು ಸ್ನೇಹಿತರು ಕಣ್ಣೀರು ಹಾಕಿದ್ದಾರೆ.