ಬೆಂಗಳೂರು: ಚಿತ್ರೀಕರಣಕ್ಕೆ ಸರ್ಕಾರದಿಂದ ಅವಕಾಶ ಸಿಗುತ್ತಿದ್ದಂತೆ ಹಲವು ಚಿತ್ರಗಳ ಕೆಲಸಗಳು ಗರಿಗೆದರಿದ್ದು, ಸ್ಯಾಂಡಲ್ವುಡ್ ನಟ, ನಟಿಯರು ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಮತ್ತೆ ತೊಡಗಿಕೊಳ್ಳುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ತಾವು ನಟಿಸುತ್ತಿರುವ ಮುಂದಿನ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಸಿಂಪಲ್ ಆಗಿ ಮಾಡಿ ಮುಗಿಸಿದ್ದು, ಇದರ ಬೆನ್ನಲ್ಲೇ ಇದೀಗ ವಿಶೇಷ ಆಹ್ವಾನವೊಂದನ್ನು ನೀಡಿದ್ದಾರೆ.
ಹೌದು ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ತಾವು ನಟಿಸುತ್ತಿರುವ ಮುಂದಿನ ಚಿತ್ರ ‘ಹರಿಕಥೆ ಅಲ್ಲಾ ಗಿರಿಕಥೆ’ ಸಿನಿಮಾ ಮೂಹೂರ್ತ ಸಮಾರಂಭವನ್ನು ನೆರವೇರಿಸಿದ್ದಾರೆ. ಇದೀಗ ತಮಗೆ ಜೋಡಿಯಾಗಿ ನಟಿಸುವ ಹೀರೋಯಿನ್ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಈ ಕುರಿತು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ ‘ಹರಿಕಥೆ ಅಲ್ಲಾ ಗಿರಿಕಥೆ’ ಸಿನಿಮಾಗೆ ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಛಾನ್ಸ್!!! ಎಂಬ ಸಾಲುಗಳನ್ನು ಬರೆದು ಪೋಸ್ಟರ್ ಹಾಕಿದ್ದಾರೆ. ಈ ಪೋಸ್ಟರ್ ಫೋಟೋದಲ್ಲಿ ಆಡಿಶನ್ ವಿಡಿಯೋ ಕಳುಹಿಸುವ ನಟಿಯರಿಗೆ ವಿಶೇಷ ಸೂಚನೆಯೊಂದನ್ನು ನೀಡಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
ತನ್ನ ತಂದೆಯನ್ನು ಮೀಟ್ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳೊ ಪ್ರೇಯಸಿಯಂತೆ ಅಭಿನಯಿಸಿ, ಒಂದು ನಿಮಿಷದ ವಿಡಿಯೋ ಕಳುಹಿಸಿ ಎಂದು ಯುವ ಕಲಾವಿದರಲ್ಲಿ ಕೇಳಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಈ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ನೋಟ್ ವಾಸ್ ಬೆಂಕಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಬಾಲಿವುಡ್ನವರು ಇವರನ್ನು ನೋಡಿ ಕಲಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಗಿರಿಕೃಷ್ಣ ಬರೆದು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರಿಷಬ್ ಕುಟುಂಬದವರು, ನಟ ರಕ್ಷಿತ್ ಶೆಟ್ಟಿ ಮತ್ತು ಸಂದೇಶ್ ನಾಗರಾಜ್ ಹಾಗೂ ಚಿತ್ರತಂಡ ಭಾಗವಹಿಸಿತ್ತು. ಜುಲೈನಲ್ಲಿ ಚಿತ್ರೀಕರಣ ಆರಂಭಿಸಲು ಚಿಂತ್ರತಂಡ ಸಿದ್ಧತೆ ನಡೆಸಿದೆ. ಶೂಟಿಂಗ್ ಜೊತೆಗೆ ಪಾತ್ರಕ್ಕೆ ಸೂಕ್ತವಾದ ನಾಯಕಿ ಆಯ್ಕೆ ಸಹ ನಡೆಯಲಿದೆ. ಉಳಿದಂತೆ ಬಾಕಿ ಪಾತ್ರಗಳಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈಗಾಗಲೇ ಅನೇಕರು ತಮ್ಮ ವಿಡಿಯೋಗಳನ್ನು ಕಳುಹಿಸುತ್ತಿದ್ದು, ಚಿತ್ರತಂಡ ಸಹ ಪರಿಶೀಲಿಸುತ್ತಿದೆ.