– ತೆನೆ ‘ಹೊರೆ’ ಇಳಿಸಿ ‘ಕೈ’ ಹಿಡಿತಾರಾ?
ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತೆನೆ ಹೊರೆಯನ್ನ ಇಳಿಸುವ ಸುಳಿವು ನೀಡಿದ್ದಾರೆ. ಒಂದು ಜೆಡಿಎಸ್ ಮುಖಂಡರು ಬಿಜೆಪಿ ಜೊತೆಗೆ ಹೋದ್ರೆ ನೂರಕ್ಕೆ ನೂರರಷ್ಟು ಜನತಾದಳದಲ್ಲಿರಲ್ಲ ಎಂದು ಹೇಳಿದ್ದಾರೆ.
ನಾನು ಅಧಿಕಾರದ ಹಿಂದೆ ಹೋಗಿದ್ರೆ ತುಮಕೂರು ಜಿಲ್ಲೆಯ ಉಸ್ತುವಾರಿ ಆಗಿರುತ್ತಿದ್ದೆ. ನಾನು ವಾಮ ಮಾರ್ಗದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಜೆಡಿಎಸ್ ನಲ್ಲಿಯ ಕೆಲವರು ಬಿಜೆಪಿ ಜೊತೆ ಹೋಗುವ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಬೇಡ ಅಂತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಹೋಗುವ ನಿರ್ಧಾರವನ್ನು ನಮ್ಮದೇ ಪಕ್ಷದ ಕೆಲ ಶಾಸಕರು ವಿರೋಧ ಮಾಡುತ್ತಾರೆ. ಒಂದು ವೇಳೆ ನಾನು ಪಕ್ಷ ತೊರೆದ್ರೆ ಕುಮಾರಸ್ವಾಮಿ ಅವರು ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿ ಜೊತೆಗಿನ ಸ್ನೇಹದ ಬಗ್ಗೆ ಕೆಲ ಶಾಸಕರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಜಣ್ಣ ಭೇಟಿಗೆ ಪ್ರತಿಕ್ರಿಯಿಸಿದ ಶಾಸಕರು, ಅವರು ಹಿರಿಯ ಮುಖಂಡರು. ರಾಜಣ್ಣ ಜೊತೆಗೆ ತುಂಬಾ ದಿನಗಳಿಂದ ಒಡನಾಟವಿದ್ದು, ಹಾಗಾಗಿ ಅವರ ಮನೆಗೆ ಬಂದಿದ್ದೇನೆ. ಕಾಂಗ್ರೆಸ್ ನಾಯಕರು ಯಾರು ನನ್ನನ್ನು ಸಂಪರ್ಕಿಸಿಲ್ಲ. ಸದ್ಯಕ್ಕೆ ನಾನು ಜೆಡಿಎಸ್ ಶಾಸಕನಾಗಿದ್ದು, ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ರಾಜಕೀಯ ಬೇಸರವಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅಸಮಾಧಾನ ಇದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಅಸಹ್ಯಪಡುವಂತಿದ್ದು, ಹೀಗಾಗಿ ಎಲ್ಲೂ ಹೋಗದೇ ತೋಟದಲ್ಲಿದ್ದೇನೆ. ಬಿಜೆಪಿ ಜೊತೆಗಿನ ಸಖ್ಯ ಬಗ್ಗೆ ನೀವು ಕುಮಾರಸ್ವಾಮಿ ಅವರನ್ನ ಕೇಳಬೇಕು. ನಾನು ಜೆಡಿಎಸ್ ಶಾಸಕ, ಇಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾದಂತಿದೆ. ಸಿದ್ದರಾಮಯ್ಯರನ್ನ ಸೋಲಿಸಬೇಕೆಂದು ಬೆಂಬಲ ನೀಡಿದ್ದು ನಿಜ. ಅಕ್ಷರಶಃ ಸತ್ಯ, ಅದೊಂದೇ ಕ್ಷೇತ್ರವಲ್ಲ ಸುಮಾರು ಕ್ಷೇತ್ರಗಳಲ್ಲಿ ಬಿಜೆಪಿ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದೀವಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಇದರಲ್ಲಿ ಹೊಸದೇನಿದೆ ಎಂದು ಎಸ್.ಆರ್.ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.