– ಗ್ರಹಣ ವೇಳೆ ಒನಕೆ ನಿಲ್ಲಿಸಿದ ಜನರು
ಚಾಮರಾಜನಗರ: ಕಂಕಣ ಸೂರ್ಯಗ್ರಹಣ ಗಡಿ ಜಿಲ್ಲೆಯಲ್ಲಿ ಗರಿಷ್ಠ ಶೇ. 37 ರಷ್ಟು ಮಾತ್ರ ಗೋಚರವಾಗಿದೆ. ಬೆಳಗ್ಗೆ 10.11ಕ್ಕೆ ಆರಂಭವಾದ ಗ್ರಹಣ 11.44 ನಿಮಿಷಕ್ಕೆ ಗರಿಷ್ಠ ಪ್ರಮಾಣದಲ್ಲಿ ಗೋಚರವಾಯಿತು.
ಆರಂಭದಲ್ಲಿ ಮೋಡಕವಿದ ವಾತಾವರಣ ಇದ್ದು, ಜನರಲ್ಲಿ ನಿರಾಶೆ ಮೂಡಿಸಿತ್ತು. ಆದರೆ 11 ಗಂಟೆಯ ಬಳಿಕ ಮೋಡಗಳು ಸರಿದು ಪಾರ್ಶ್ವ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಿತು. ಈ ಮೂಲಕ ಶೇ.37 ರಷ್ಟು ಗ್ರಹಣ ಗೋಚರವಾಗಿದ್ದು, ಮಧ್ಯಾಹ್ನ 1.27ಕ್ಕೆ ಸೂರ್ಯ ಗ್ರಹಣ ಕೊನೆಗೊಂಡಿತು.
ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆಯಿಂದ ಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಹೊರತುಪಡಿಸಿದರೆ ಇತರ ಕಡೆಗಳಲ್ಲಿ ಸಾರ್ವಜನಿಕವಾಗಿ ಸೂರ್ಯಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಜನರು ತಮ್ಮ ತಮ್ಮ ಮನೆಗಳ ಟೆರೇಸ್ಗಳ ಮೇಲೆ ನಿಂತು, ಸೌರ ಕನ್ನಡಕಗಳ, ಪಿನ್ ಹೋಲ್ ಕ್ಯಾಮೆರಾಗಳ ಮೂಲಕ ಹಾಗೂ ಟೆಲಿಸ್ಕೋಪ್ಗಳ ಮೂಲಕ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.
ಒನಕೆ ನಿಲ್ಲಿಸಿದ ಜನರು:
ಗ್ರಹಣಗಳು ಬಂತೆಂದೆರೆ ಜನರು ಮೂಢನಂಬಿಕೆಗಳ ಮೊರೆಹೋಗುವುದು ಸಾಮಾನ್ಯ. ಅದೇ ರೀತಿ ಚಾಮರಾಜನಗರದಲ್ಲಿ ಸೂರ್ಯಗ್ರಹಣದ ವೇಳೆ ತಟ್ಟೆಯಲ್ಲಿ ಒನಕೆ ನಿಲ್ಲಿಸುವ ಮೂಲಕ ಗ್ರಹಣ ಖಚಿತಪಡಿಸಿಕೊಂಡರು.
ನಗರದ ಶಂಕರಪುರ ಬಡಾವಣೆಯಲ್ಲಿ ಗ್ರಹಣದ ವೇಳೆ ತಟ್ಟೆಯೊಂದರಲ್ಲಿ ಒನಕೆ ನಿಲ್ಲಿಸಿದರು. ಅದು ಯಾವುದೇ ಸಪೋರ್ಟ್ ಇಲ್ಲದೆ ನೇರವಾಗಿ ನಿಂತಿದ್ದನ್ನು ನೋಡಿ ಖುಷಿಪಟ್ಟರು. ಗ್ರಹಣ ಹಿಡಿಯುವಾಗ ನೇರವಾಗಿ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟಾಗ ಒನಕೆ ಬಿದ್ದು ಹೋಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.