– ಹೆಸರು ಒಂದೇ ಇದ್ದಿದ್ದರಿಂದ ಅದಲು ಬದಲು
– ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಎಡವಟ್ಟು
ದಿಸ್ಪುರ್: ಅಸ್ಸಾಂನ ದರಾಂಗ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದು ಮಹಾ ಎಡವಟ್ಟು ಮಾಡಿದ್ದು, ಗುಣಮುಖವಾದ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡುವ ಬದಲು ಸೋಂಕಿತನನ್ನು ಡಿಸ್ಚಾರ್ಜ್ ಮಾಡಿದೆ.
ದರಾಂಗ್ ಜಿಲ್ಲೆಯ ಮಂಗಳದಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಜಿಲ್ಲಾಡಳಿತ ಮ್ಯಾಜಿಸ್ಟ್ರೇಟಿಯಲ್ ತನಿಖೆಗೆ ಆದೇಶಿಸಿದೆ. ವರದಿಗಳ ಪ್ರಕಾರ ಮಂಗಳದಾಯಿ ಆಸ್ಪತ್ರೆಯಿಂದ 14 ಜನ ಗುಣಮುಖರಾಗಿದ್ದು, ಇವರನ್ನು ಡಿಸ್ಚಾರ್ಜ್ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಸರ್ಕಾರ ಕಳುಹಿಸಿದ್ದ ಪಟ್ಟಿಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರ ಹೆಸರನ್ನು ಮಿಕ್ಸ್ ಮಾಡಿದ್ದು, ಗುಣಮುಖರಾದವರನ್ನು ಬಿಡುಗಡೆ ಮಾಡುವ ಬದಲು ಸೋಂಕಿತನನ್ನು ಬಿಡುಗಡೆ ಮಾಡಿದೆ.
ಒಟ್ಟು 14 ಜನರ ಪೈಕಿ 6 ಜನರನ್ನು ಬಿಡುಗಡೆ ಮಾಡಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿದೆ. ಜೂನ್ 5ರಿಂದ ಚಿಕಿತ್ಸೆ ಪಡೆಯುತ್ತಿದ್ದ ವಲಸೆ ಕಾರ್ಮಿಕ ಹಾಗೂ ಇದೇ ಹೆಸರಿನ ಮತ್ತೊಬ್ಬ ವ್ಯಕ್ತಿ ಜೂನ್ 3ರಂದು ಆಸ್ಪತ್ರೆಗೆ ದಾಖಲಾಗಿದ್ದ. ಇಬ್ಬರೂ ದರಾಂಗ್ ಜಿಲ್ಲೆಯ ದಲ್ಗಾನ್ ಪ್ರದೇಶದವರಾಗಿದ್ದಾರೆ.
ಬುಧವಾರ ಅಧಿಕಾರಿಗಳು ಕೊರೊನಾದಿಂದ ಗುಣಮುಖರಾದ ಐದು ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ಈ ವೇಳೆ ಸ್ಥಳೀಯ ಶಾಸಕ ಗುರುಜ್ಯೋತಿ ದಾಸ್, ಜಿಲ್ಲಾಧಿಕಾರಿ ದಿಲಿಪ್ ಕುಮಾರ್ ಬೋರಾ ಹಾಗೂ ಎಸ್ಪಿ ಅಮೃತ್ ಭುಯನ್ ಸಹ ಈ ವೇಳೆ ಉಪಸ್ಥಿತರಿದ್ದರು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಹೆಸರುಗಳನ್ನು ಮಿಕ್ಸ್ ಮಾಡಿ ತಪ್ಪು ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಿದೆ.
ಈ ಕುರಿತು ಮಂಗಳದಾಯಿ ಆಸ್ಪತ್ರೆಯ ಹಿರಿಯ ವೈದ್ಯ ಮಾಹಿತಿ ನೀಡಿ, ಇಬ್ಬರು ವ್ಯಕ್ತಿಗಳ ಹೆಸರು ಒಂದೇ ಆಗಿದ್ದರಿಂದ ಮಿಕ್ಸ್ ಆಯಿತು. ಡಿಸ್ಚಾರ್ಜ್ ಮಾಡಿದ ಕೊರೊನಾ ಸೋಂಕಿತ ಅಂಬುಲೆನ್ಸ್ನಲ್ಲಿ ಬುಧವಾರ ರಾತ್ರಿ 9ರ ಸುಮಾರಿಗೆ ತನ್ನ ಊರು ತಲುಪಿದ್ದಾನೆ ಎಂದು ವಿವರಿಸಿದ್ದಾರೆ.
ವೈದ್ಯಾಧಿಕಾರಿಗಳಿಗೆ ತಾವು ಮಾಡಿದ ಎಡವಟ್ಟಿನ ಕುರಿತು ಅರಿವಾಗುತ್ತಿದ್ದಂತೆ ಗುರುವಾರ ಆತನನ್ನು ಮರಳಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.
ಅದೃಷ್ಟವಶಾತ್ ಡಿಸ್ಚಾರ್ಜ್ ಮಾಡಿದ ವ್ಯಕ್ತಿಯ ವರದಿ ಸಹ ಇದೀಗ ನೆಗೆಟಿವ್ ಬಂದಿದೆ. ಅಲ್ಲದೆ ಆರೋಗ್ಯಾಧಿಕಾರಿಗಳು ಈಗಾಗಕಲೇ ಈತನ ಮನೆ ಹಾಗೂ ಕುಟುಂಬಸ್ಥರ ಸುತ್ತಲಿನ ಪ್ರದೇಶದಲ್ಲಿರುವ ಜನ ಗಂಟಲು ದ್ರವವನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಆತನ ಮನೆಯ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿಲಿಪ್ ಕುಮಾರ್ ಬೋರಾ ತಿಳಿಸಿದ್ದಾರೆ.