ಉಡುಪಿ: ನಾಟಕೀಯ ಶೈಲಿಯ ಹಾಡುಗಳ ಮೂಲಕ ಫೇಸ್ಬುಕ್ ನಲ್ಲಿ ಫೇಮಸ್ ಆಗಿರುವ ಕಲಾವಿದೆ, ಭರತ ನಾಟ್ಯ ಶಿಕ್ಷಕಿ ಮಾನಸಿ ಸುಧಿರ್ ಗಣೇಶ ಚತುರ್ಥಿ ಸಂದರ್ಭ ಮತ್ತೆ ಸದ್ದು ಮಾಡಿದ್ದಾರೆ. ಹಾಡು ಮತ್ತು ನಟನೆ ಮಾಡಿರುವ ವಿಡಿಯೋ ಬಹಳ ಜನಮನ್ನಣೆ ಪಡೆದಿದೆ.
ಗಣಪನ ಹಾಡಿನ ನಡುವೆ ಅಆಇಈ ಪಾಠವನ್ನು ಪುಟಾಣಿ ಮಕ್ಕಳಿಗೆ ಮಾಡಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಅದ್ಭುತ ಹಾಡು ರಿಲೀಸ್ ಆಗಿದೆ. ಕಥನ ಶೈಲಿಯ ಈ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ. ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ.
https://www.facebook.com/publictv/videos/620672505517760/
ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಅಂತ ಈ ವಿಡಿಯೋ ಸಾರಿ ಹೇಳುತ್ತಿದೆ.