– ಆಕರ್ಷಿಸುತ್ತಿದೆ ಆಡುಮಲ್ಲೇಶ್ವರ ಮೃಗಾಲಯ
ಚಿತ್ರದುರ್ಗ: ಕೊರೊನಾ ಭೀತಿಯಿಂದಾಗಿ ಸತತ ಎರಡು ತಿಂಗಳುಗಳಿಂದ ಸಂಪೂರ್ಣ ಬಂದ್ ಆಗಿದ್ದ ಜೋಗಿಮಟ್ಟಿ ಅರಣ್ಯ ಧಾಮದಲ್ಲಿರುವ ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ತೆರೆಯಲಾಗಿದೆ. ಜೂನ್ 24 ರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡುಮಲ್ಲೇಶ್ವರ ಕಿರುಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಕೋವಿಡ್-19 ಎರಡನೇ ಅಲೆಯ ತೀವ್ರತೆಯನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ವೀಕ್ಷಣೆಗೆ ನಿಬರ್ಂಧಿಸಲಾಗಿತ್ತು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಜೂನ್ 21ರಂದು ಕೋವಿಡ್-19 ನಿಯಂತ್ರಣದ ಮಾನದಂಡಗಳೊಂದಿಗೆ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಅನ್ಲಾಕ್ ಘೋಷಿಸಿರುತ್ತಾರೆ. ಅದರಂತೆ ಕರ್ನಾಟಕದ ವಿವಿಧ ಮೃಗಾಲಯಗಳನ್ನು ಪ್ರವಾಸಿಗರು, ವೀಕ್ಷಕರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.
ನಾಳೆಯಿಂದ ಕಿರುಮೃಗಾಲಯ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದ್ದು, ನೂತನವಾಗಿ ನಿರ್ಮಾಣ ಮಾಡಿರುವ ಸುಸಜ್ಜಿತ ಬೃಹತ್ ಕರಡಿ ಜೋನ್, ಚಿರತೆಗಳ ಘರ್ಜನೆ, ಜಿಂಕೆಗಳ ಫ್ರೀಡಮ್ ಓಡಾಟ ಹಾಗು ವಿವಿಧ ಆಕರ್ಷಕ ಪಕ್ಷಿಗಳ ನಿನಾದವನ್ನು ಪ್ರವಾಸಿಗರು ಸವಿಯಬಹುದಾಗಿದೆ. ಆದರೆ ಕಿರು ಮೃಗಾಲಯಕ್ಕೆ ಮಕ್ಕಳೊಂದಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ವೀಕ್ಷಣೆಗೆ ಧಾವಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಿರುಮೃಗಾಲಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವೀಕೆಂಡ್ ನಲ್ಲಿ ಸಹಸ್ರಾರು ಜನರು ವಿವಿಧೆಡೆಗಳಿಂದ ಈ ಮೃಗಾಲಯದಲ್ಲಿನ ಪ್ರಾಣಿಗಳ ವೀಕ್ಷಣೆಗೆ ಬರಲಿದ್ದಾರೆ. ಹೀಗಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಿಬ್ಬಂದಿ ನೇಮಿಸುವ ಮೂಲಕ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಲಾಗಿದೆ. ಹೀಗಾಗಿ ಪ್ರವಾಸಿಗರು ನಿರಾತಂಕವಾಗಿ ಕಿರು ಮೃಗಾಲಯ ವೀಕ್ಷಿಸಲು ಕೋವಿಡ್ ನಿಯಮ ಪಾಲನೆಯೊಂದಿಗೆ ಧಾವಿಸಿ ಎಂಜಾಯ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಿಗಬೇಕು ಅದೇ ರಾಜಕಾರಣ: ಎಂಟಿಬಿ