ಹಾವೇರಿ: ಕೊರೊನಾ ವಾರಿಯರ್ಸ್ ಮೇಲೆ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯ ದಬ್ಬಾಳಿಕೆ ಮಾಡಿದ ಘಟನೆ ಹಾವೇರಿ ನಗರದ ಫಿವರ್ ಕ್ಲಿನಿಕ್ನಲ್ಲಿ ನಡೆದಿದೆ. ರೈತ ಸಂಘದ ಅಧ್ಯಕ್ಷೆ ಮಂಜುಳಾ ಅಕ್ಕಿ, ಕಿವಿ ನೋವು ಅಂತಾ ಔಷಧಿ ಪಡೆಯಲು ಬಂದಿದ್ದ ವೇಳೆ ಘಟನೆ ನಡೆದಿದೆ.
ಔಷಧಿ ಕೈಯಲ್ಲಿ ಕೊಡದೆ ಕಿಟಕಿಯಲ್ಲಿ ಕೆಳಗೆ ಇಟ್ಟಿದ್ದಕ್ಕೆ ಫಾರ್ಮಾಸಿಸ್ಟ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎನ್ನಲಾಗಿದೆ. ರೈತ ಸಂಘದ ಅಧ್ಯಕ್ಷೆಯ ದಬ್ಬಾಳಿಕೆಗೆ ಫಾರ್ಮಾಸಿಸ್ಟ್ ಅಂಜನಾ ಪಾಟೀಲ್ ಕಣ್ಣೀರು ಹಾಕಿದ್ದಾರೆ. ಜಗಳ ಬಿಡಿಸಲು ಬಂದ ಸಿಸ್ಟರ್ ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ನಡೆದ ಘಟನೆ ಹೇಳಲು ಮುಂದಾದ ಆಸ್ಪತ್ರೆಗೆ ಬಂದ ರೋಗಿಯ ಮೇಲೆ ಮಣ್ಣು ತೂರಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಮಹಿಳಾ ಅಧ್ಯಕ್ಷೆಯ ಆವಾಂತರಕ್ಕೆ ಆರೋಗ್ಯ ಸಿಬ್ಬಂದಿ ಕೆಲಕಾಲ ಬೆಚ್ಚಿಬಿದ್ದರು. ಫಾರ್ಮಾಸಿಸ್ಟ್, ಆರೋಗ್ಯ ಇಲಾಖೆ ಹಾಗೂ ಸ್ಥಳೀಯರ ಆರೋಪವನ್ನು ರೈತ ಸಂಘದ ಮಹಿಳಾ ಅಧ್ಯಕ್ಷೆ ಅಲ್ಲಗಳೆದಿದ್ದು, ಸರಿಯಾದ ರೀತಿಯ ಔಷಧಿ ನೀಡಿಲ್ಲ ಎಂದಿದ್ದಾರೆ. ಸ್ಥಳಕ್ಕೆ ಸಿಪಿಐ ಪ್ರಭಾವತಿ ಹಾಗೂ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.