ಮಂಡ್ಯ: ಇಡೀ ವಿಶ್ವವ್ಯಾಪಿ ವ್ಯಾಪಕವಾಗಿ ಹರಡಿರುವ ಕೊರೊನಾ ಮಹಾಮಾರಿ ತೊಲಗಲಿ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮದ ಗ್ರಾಮಸ್ಥರು 20ಕ್ಕೂ ಹೆಚ್ಚು ಮೇಕೆ,ಕುರಿ ಮತ್ತು ಕೋಳಿಗಳನ್ನು ಬಲಿ ನೀಡಿದ್ದಾರೆ.
ಚೆನ್ನಪಿಳ್ಳೆಕೊಪ್ಪಲು ಗ್ರಾಮದ ಗ್ರಾಮಸ್ಥರು ಸುಜ್ಜಲೂರು ಮಾರಮ್ಮ ದೇವಿಗೆ ಮೇಕೆ, ಕುರಿ, ಕೋಳಿಗಳನ್ನು ಬಲಿ ಕೊಡುವ ಮೂಲಕ ಕೊರೊನಾ ಮಹಾಮಾರಿ ತೊಲಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಗ್ರಾಮದ ಬೀದಿ ಬೀದಿಗೆ ತೋರಣ ಕಟ್ಟಿ ಗ್ರಾಮ ದೇವತೆಯ ಹಬ್ಬದ ರೀತಿ ಆಚರಣೆ ಮಾಡುವ ಮೂಲಕ ಕೊರೊನಾ ಬರದೆ ಇರಲಿ ಎಂದು ಮಾರಮ್ಮಾ ದೇವಿಯೊಂದಿಗೆ ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ
ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಮದ ಜನರು ಈ ರೀತಿ ಆಚರಣೆ ಮಾಡಿದ್ದಾರೆ. ಈ ಹಿಂದೆ ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ಇದೇ ರೀತಿ ಹಬ್ಬಗಳನ್ನು ಮಾಡಿದ್ದೇವೆ, ಈ ಸಂದರ್ಭ ರೋಗಗಳು ವಾಸಿಯಾಗಿವೆ. ಅದೇ ರೀತಿ ಈಗಲೂ ಸಹ ಆಚರಣೆ ಮಾಡಿದ್ದೇವೆ ಕೊರೊನಾ ಆದಷ್ಟು ಬೇಗ ತೊಲಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.