– ಕೊನೆಗೂ ಮನವೊಲಿಸಿದ ಅಧಿಕಾರಿಗಳಿಂದ ಅಂತ್ಯಕ್ರಿಯೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ಸುರತ್ಕಲ್ನ ಯುವಕನ ಅಂತ್ಯಸಂಸ್ಕಾರಕ್ಕೆ ಜನ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಸುರತ್ಕಲ್ನ ಇಡ್ಯಾ ನಿವಾಸಿ 31ರ ಹರೆಯದ ಯುವಕ ಕೊರೊನಾದಿಂದ ಮೃತನಾಗಿದ್ದ. ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಇಡ್ಯಾದಲ್ಲಿರುವ ದಫನ್ ಭೂಮಿಯಲ್ಲಿ ನಡೆಸುವ ನಿರ್ಧಾರ ಮಾಡಲಾಗಿತ್ತು. ಆದರೆ ಕಬರ್ ಗುಂಡಿಯಲ್ಲಿ ನೀರು ತುಂಬಿದ್ದರಿಂದ ನಗರದ ಬೋಳಾರ ಬಳಿಯ ದಫನ್ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಅಧಿಕಾರಿಗಳು ಮುಂದಾಗಿದ್ದರು.
ಆದರೆ ಬೇರೆ ಗ್ರಾಮದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನಮ್ಮ ಊರಲ್ಲಿ ಮಾಡದಂತೆ ಬೋಳಾರದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಪರಿಣಾಮ ನಾಲ್ಕು ಗಂಟೆಗಳ ಕಾಲ ಮೃತದೇಹವನ್ನು ಅಂಬುಲೆನ್ಸ್ ನಲ್ಲೇ ಇಡಬೇಕಾಯಿತು. ಬಳಿಕ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳೀಯರ ಮನವೊಲಿಸಿದ ಬಳಿಕ ಕೊನೆಗೂ ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯನ್ನು ಬೋಳಾರದಲ್ಲಿರುವ ದಫನ್ ಭೂಮಿಯಲ್ಲೇ ನಡೆಸಲಾಯಿತು.