ಚಿತ್ರದುರ್ಗ: ದೇಶದಾದ್ಯಂತ ಕೊರೊನಾ ಸೋಂಕಿನಿಂದ ಜನರ ಪರಿಸ್ಥಿತಿ ಕಂಡು ಬೇಸತ್ತಿರುವ ಗ್ರಾಮಸ್ಥರು, ಕೊರೊನಾ ತೊಲಗಲಿ ಎಂದು ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿಗೆ ಪೂಜೆ ಮಾಡಿ ಮೌಢ್ಯಾಚರಣೆಯ ಮೊರೆ ಹೋಗಿರುವ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.
ಕೊರೊನಾ ತೊಲಗಲಿ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದುಗ್ಗಾವರ ಗ್ರಾಮದ ಗ್ರಾಮಸ್ಥರು, ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಮಧ್ಯಭಾಗದಲ್ಲಿ ಮೂರ್ತಿ ಸ್ಥಾಪಿಸಿ ಪೂಜೆ ನೆರವೇರಿಸಿದ ಗ್ರಾಮಸ್ಥರು ಕುರಿ, ಕೋಳಿ, ಮೊಸರನ್ನು ನೈವೇದ್ಯ ಅರ್ಪಣೆ ಮಾಡಿ ಮೌಢ್ಯಾಚರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ. ಕೊರೊನಾದಿಂದ ಪಾರಾಗಲು ಪೂಜೆ, ಪುನಸ್ಕಾರ – ಹಳ್ಳಿಗಳಲ್ಲಿ ನಡೀತಿದೆ ಶಾಂತಿ ಪೂಜೆ, ಹೋಮ
ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಇದ್ದರು ಕೂಡ ಕೊರೊನಾ ಭೀತಿ ಮರೆತು ಮಾಸ್ಕ್, ದೈಹಿಕ ಅಂತರ ಪಾಲನೆ ಮಾಡದೆ ನೂರಾರು ಜನ ಮೌಢ್ಯಾಚರಣೆ ಮೊರೆಹೋಗಿದ್ದಾರೆ. ಗ್ರಾಮಸ್ಥರ ನಂಬಿಕೆ ಪ್ರಕಾರ ಈ ರೀತಿ ಪೂಜೆ, ನೈವೇದ್ಯ ಅರ್ಪಣೆ ಮಾಡಿ ಕೊರೊನಮ್ಮ ಮೂರ್ತಿ ಊರ ಸೀಮೆ ದಾಟಿಸಿದರೆ ಕೊರೊನಾ ಗ್ರಾಮಕ್ಕೆ ಬರುವುದಿಲ್ಲ ಎಂದು ನಂಬಿಕೆ ಇಟ್ಟುಕೊಂಡಿದ್ದಾರೆ.