ಮಂಡ್ಯ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೀರು ಪಾಲಾದ ಘಟನೆ ನಾಗಮಂಗಲ ತಾಲೂಕಿನ ಬೀರನಹಳ್ಳಿಯಲ್ಲಿ ನಡೆದಿದೆ.
ಬೀರನಹಳ್ಳಿಯ ಗೀತಾ(40), ಮಕ್ಕಳಾದ ಸವಿತಾ(19) ಹಾಗೂ ಸೌಮ್ಯ(14) ಮೃತ ದುರ್ದೈವಿಗಳು. ಕೆರೆ ಬಳಿ ಇಂದು ಯಾರೂ ಇಲ್ಲದೆ ಇದ್ದಾಗ ಘಟನೆ ನಡೆದಿದೆ. ಬಟ್ಟೆ ತೊಳೆಯಲು ಹೋಗಿದ್ದ ಮೂವರಲ್ಲಿ ಒಬ್ಬರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋಗಿ ಮತ್ತಿಬ್ಬರು ದಾರುಣ ಸಾವು ಕಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕೆರೆಯಲ್ಲಿ ತೇಲುತ್ತಿದ್ದ ಬಿಂದಿಗೆ, ದಡದಲ್ಲಿದ್ದ ಬಟ್ಟೆ ನೋಡಿ ಕರೆಯಲ್ಲಿ ಯಾರೋ ಜಾರಿ ಬಿದ್ದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ಪರಿಶೀಲನೆ ನಡೆಸಿದಾಗ ವೇಳೆ ಮೂವರ ಮೃತಪಟ್ಟಿರುವ ದೃಢವಾಗಿದೆ. ಬಳಿಕ ಮೃತದೇಹಗಳನ್ನ ಕೆರೆಯಿಂದ ಹೊರ ತೆಗೆಯಲಾಗಿದೆ.
ಮಹಿಳೆ ಹಾಗೂ ಮಕ್ಕಳ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.