ಮೈಸೂರು: ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ವಿರುದ್ಧ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಂದನಹಳ್ಳಿ ಗ್ರಾಮದ ಗೇಟ್ ಬಳಿ ನಡೆದಿದೆ.
ಜನವರಿ 22 ರಂದು ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಆರೋಪಿ ಜಯಂತ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಅಲ್ಲದೆ ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಆರೋಪಿ ಜಯಂತ್ ಹಾಗೂ ವಿಘ್ನೇಶ್, ದೀಪಕ್ನನ್ನು ಬಂಧಿಸಿದ್ದರು. ಆರೋಪಿಗಳು ಹಂದನಹಳ್ಳಿ ಗ್ರಾಮದ ಗೇಟ್ ಬಳಿ ಹೆಡ್ ಕಾನ್ಸ್ಟೇಬಲ್ ರವಿ ಸೇರಿದಂತೆ ಇತರೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಎಸ್ಐ ಜಯಪ್ರಕಾಶ್ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಆರೋಪಿ ಜಯಂತ್ ಕಾಲಿಗೆ ಗುಂಡು ತಗುಲಿದ್ದು ಇದೀಗ ಆತನನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಲ್ಲದೆ ಆರೋಪಿಗಳ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಪೇದೆಗಳಿಗೂ ಕೆ.ಆರ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ.