ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಗರದ ದಂಟರಮಕ್ಕಿ ಕೆರೆ ಮಧ್ಯೆಯಲ್ಲಿದ್ದ ಸ್ವಾಮಿ ವಿವೇಕಾನಂದರ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸ್ವಾಮಿ ವಿವೇಕಾನಂದ ಮೂರ್ತಿ ನಿರ್ಮಾಣಗೊಂಡು ವರ್ಷಗಳೇ ಕಳೆದಿದ್ದರೂ ವಿರೂಪಗೊಂಡಿದ್ದ ಮೂರ್ತಿಯನ್ನು ಬದಲಿಸಲು ಯಾರೂ ಮುಂದಾಗಿರಲಿಲ್ಲ. ಅಲ್ಲಲ್ಲೇ ಪ್ಯಾಚ್ ವರ್ಕ್ ಮೂಲಕ ಅದೇ ಮೂರ್ತಿಯನ್ನು ಪುನಃ ಸರಿ ಮಾಡಿದ್ದರು. ಆದರೆ ಆ ಮೂರ್ತಿಯ ಬಣ್ಣ, ನಿಂತ ಭಂಗಿ ನೋಡಿ ವಿವೇಕಾನಂದರದ್ದು ಎಂದಷ್ಟೇ ಹೇಳಬಹುದಿತ್ತೋ ವಿನಃ. ಅದನ್ನು ಯಾರೂ ಕೂಡ ವಿವೇಕಾನಂದರು ಎಂದು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.
ಈ ಮೂರ್ತಿಯನ್ನು ಕಂಡ ಸ್ಥಳೀಯರು ಹಾಗೂ ಪ್ರವಾಸಿಗರು ವಿವೇಕಾನಂದರ ಮೂರ್ತಿಗೆ ಮನಬಂದತೆ ವಿಶ್ಲೇಷಿಸಿದ್ದರು. ಕಳೆದೊಂದು ವಾರದಿಂದಂತೂ ಸಾಮಾಜಿಕ ಜಾಲತಾಣದಲ್ಲಿ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ ಇಂದು ಆ ಮೂರ್ತಿಯನ್ನು ನೆಲಸಮಗೊಳಿಸಿದ್ದು ಫೈಬರ್ ನಿಂದ ಸಿದ್ಧಗೊಂಡಿರೋ ಹೊಸ ಮೂರ್ತಿಯನ್ನು ಅದೇ ಜಾಗದಲ್ಲಿ ಪ್ರತಿಷ್ಠಾಪಿಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವಿವೇಕಾನಂದರ ಮೂರ್ತಿ ನಿರ್ಮಾಣದಲ್ಲಿ ಮುಂದಾಳತ್ವ ವಹಿಸಿದ್ದ ಮುತ್ತಯ್ಯ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಹಣ ಬಳಸಿಲ್ಲ ಸಿ.ಟಿ.ರವಿ: ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವಿವೇಕಾನಂದರ ಮೂರ್ತಿ ಬಗ್ಗೆ ಯುವಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಲು ಮುಂದಾದರೋ ಸಚಿವ ಸಿ.ಟಿ.ರವಿ ಕೂಡ ಫೇಸ್ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಪ್ರತಿಮೆ ಖಾಸಗಿ ಸಹಭಾಗಿತ್ವ ಹಾಗೂ ಸ್ಥಳೀಯ ದಾನಿಗಳಿಂದ ನಿರ್ಮಾಣಗೊಂಡಿದ್ದು. ಇದಕ್ಕೆ ಸರ್ಕಾರದ ಒಂದೇ ಒಂದು ರೂಪಾಯಿ ಕೂಡ ಬಳಸಿಲ್ಲ. ಕಳಪೆ ಕಾಮಗಾರಿ ಹಾಗೂ ಮೂರ್ತಿಯ ರೂಪದ ಬಗ್ಗೆ ಎಲ್ಲರಲ್ಲೂ ಅಸಮಾಧಾನವಿದೆ. ಆದರೆ ಕೆಲಸ ಮಾಡಲು ಬಂದ ಗುತ್ತಿಗೆದಾರ ಹಣ ಪಡೆದು ಪರಾರಿಯಾಗಿದ್ದಾನೆ. ಕಂಟ್ರಾಕ್ಟರ್, ಸಬ್ ಕಂಟ್ರಾಕ್ಟರ್ ಗಳು ಕೆಲಸ ಮಾಡಿಲ್ಲ. ಹಾಗಾಗಿ ಇಂದು ಮೂರ್ತಿ ಈ ಹಂತ ತಲುಪಿದೆ. ಇದರಲ್ಲಿ ಸರ್ಕಾರದ ಹಣ ನಯಾ ಪೈಸೆಯೂ ಖರ್ಚಾಗಿಲ್ಲ. ಅಷ್ಟೆ ಅಲ್ಲದೆ ಮೂರ್ತಿಯ ಬಗೆಗಿನಿ ನಿಮ್ಮ ಮನದಾಳದ ಸೂಕ್ಷ್ಮತೆ ನನಗೂ ಗೊತ್ತು ಎಂದಿದ್ದರು.
ಮೂರ್ತಿ ನಿರ್ಮಾಣದಲ್ಲಿ ಸಿ.ಟಿ.ರವಿ ಪಾತ್ರವಿಲ್ಲ: ಪ್ರವಾಸೋದ್ಯಮ ಸಚಿವರ ತವರಲ್ಲಿ ಊರ ಮಧ್ಯೆ ಇರೋ ಕೆರೆಯಲ್ಲಿನ ಮೂರ್ತಿಗೆ ಬಗ್ಗೆ ಸ್ಥಳಿಯರು ಹಾಗೂ ಪ್ರವಾಸಿಗರು ಸರ್ಕಾರ ಹಾಗೂ ಸಚಿವ ಸಿ.ಟಿ.ರವಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯೂಥ್ ಐಕಾನ್ ವಿವೇಕಾನಂದರ ವಿರೂಪ ನಿರ್ಮಾಣದ ವಿರುದ್ಧ ಸಚಿವರ ವಿರುದ್ಧವೂ ಜನ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಈ ಮೂರ್ತಿ ನಿರ್ಮಾಣದಲ್ಲಿ ಸಚಿವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಊರಿಗೆ ಒಳ್ಳೆಯದಾಗಿ ಎಂದು ನಾನೇ ಈ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ದು. ಮೂರ್ತಿಯ ಸ್ಥಿತಿ ಕಂಡು ನನಗೂ ನೋವಾಗಿದೆ. ಇದರಿಂದ ನಾನು ವೈಯಕ್ತಿಕವಾಗಿಯೂ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಶೀಘ್ರದಲ್ಲೇ ಆ ಜಾಗದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸುದುವುದಾಗಿ ಸ್ಪಷ್ಟನೆ ನೀಡಿದ್ದಾರೆ.