ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿನ ಕದ್ರಿಯಲ್ಲಿರುವ ಯೋಗೀಶ್ವರ ಜೋಗಿ ಮಠಕ್ಕೆ ಭೇಟಿ ನೀಡಿದರು.
ಕೇರಳ ವಿಧಾನಸಭಾ ಚುನಾವಣೆಯ ವಿಜಯ ಯಾತ್ರೆಯನ್ನು ಉದ್ಘಾಟಿಸಲು ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಕಾಸರಗೋಡಿಗೆ ತೆರಳಿ ಹಿಂದಿರುಗಿ ಬಂದ ಸಿಎಂ ಯೋಗಿ, ಬಳಿಕ ಕದ್ರಿ ಜೋಗಿ ಮಠಕ್ಕೆ ಆಗಮಿಸಿದರು. ಈ ವೇಳೆ ಜೋಗಿ ಮಠದ ಪ್ರಮುಖರು ಬರಮಾಡಿಕೊಂಡರು. ಯೋಗೀಶ್ವರ ಮಠದಲ್ಲಿ ಹಾಗೂ ಅಲ್ಲೇ ಇರುವ ಕಾಲಭೈರವ ದೇವರಿಗೆ ಪೂಜೆ ಸಲ್ಲಿಸಿದ ಯೋಗಿ ಬಳಿಕ ಫಲಹಾರ ಸೇವಿಸಿದರು.
ನಾಥ ಪಂಥದ ಪ್ರಮುಖ ಮಠವಾಗಿರುವ ಕದ್ರಿಯ ಜೋಗಿ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುಮಠವನ್ನು ಯೋಗಿ ಆದಿತ್ಯನಾಥ್ ಉದ್ಘಾಟಿಸಿದರು. ಇದೇ ವೇಳೆ ಉಡುಪಿ ಮಠದ ಪೇಜಾವರ ಶ್ರೀಗಳು ಯೋಗಿ ಆದಿತ್ಯನಾಥ್ ರನ್ನು ಮಠದಲ್ಲೇ ಭೇಟಿ ಮಾಡಿದರು. ಕೆಲ ಕಾಲ ಮಠದಲ್ಲಿದ್ದ ಯೋಗಿ ಬಳಿಕ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದಲ್ಲಿ ತೆರಳಿದರು.