– ಅವ್ಯವಹಾರ ಯಾರು ಮಾಡಿದ್ರೂ ತಪ್ಪೇ
ಧಾರವಾಡ: ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ವಿಚಾರವಾಗಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ಯವಹಾರ ಆಗಿಲ್ಲ, ದುಪ್ಪಟ್ಟು ಹಣ ಆಗಿದೆ ಅಂತ ಸಹಕಾರ ಸಚಿವರು ಹೇಳಿದ್ದಾರೆ. ಹಾಗೆ ಅಂದರೆ ಏನು ಅದರ ಅರ್ಥ? ಅವ್ಯವಹಾರ ಆಗಿದೆ ಅಂತಾನೇ ಆಗುತ್ತದೆ. ಸರ್ಕಾರ ಸರಿಯಾದ ರೀತಿಯಿಂದ ನಿರ್ವಹಣೆ ಮಾಡುತ್ತಿಲ್ಲ. ಸಿಎಂ ಒಬ್ಬರನ್ನು ಬಿಟ್ಟರೆ ಉಳಿದವರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದ ಹೊರಟ್ಟಿ, ಕೊರೊನಾ ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ಸರ್ಕಾರ ಕೈ ಎಬ್ಬಿಸಿ ಬಹಳ ದಿನ ಆಗಿದೆ ಎಂದ ಅವರು, ಅದಕ್ಕೆ ರಾಮುಲು ಈಗ ದೇವರೇ ಕಾಪಾಡಬೇಕು ಅಂತ ಹೇಳಿರಬಹುದು. ಕೊರೊನಾ ವಿಷಯದಲ್ಲಿ ಸರ್ಕಾರ ಯಾವ ರೀತಿ ಇರಬೇಕು, ಆ ರೀತಿ ಇಲ್ಲ. ಮಹಾರಾಷ್ಟ್ರದಲ್ಲಿ ಸಾಕಷ್ಟು ಟೀಕೆಗಳಿದ್ದವು. ಆದರೆ ಅಲ್ಲಿನ ಸರ್ಕಾರ ಈಗ ಸುಧಾರಿಸಿದೆ ಎಂದ ಅವರು, ಒಂದಿಬ್ಬರು ಸಚಿವರನ್ನು ಬಿಟ್ಟರೇ ಉಳಿದವರೆಲ್ಲ ಸಂಬಂಧವೇ ಇಲ್ಲ ಎಂಬಂತ ವರ್ತಿಸುತ್ತಿದ್ದಾರೆ. ಯಾವ ಸಚಿವರಲ್ಲಿಯೂ ಇಚ್ಛಾಸಕ್ತಿ ಕಾಣುತ್ತಿಲ್ಲ ಎಂದು ಹೊರಟ್ಟಿ ಕಿಡಿಕಾರಿದರು.
ಇದೇ ವೇಳೆ ಹಿಂದಿನ ಸರ್ಕಾರದಲ್ಲಿ ಅವ್ಯವಹಾರ ಹೊರಹಾಕುವ ಸಚಿವ ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಸುಧಾಕರ್ ಕೂಡ ಇದ್ರಲ್ಲ, ತನಿಖೆ ಮಾಡಲಿ. ಅದರಲ್ಲಿ ನಮ್ಮ ತಕರಾರಿಲ್ಲ. ಹಿಂದಿನವರು ಮಾಡಿದ್ರು ತಪ್ಪು ಈಗಿನವರು ಮಾಡಿದರೂ ತಪ್ಪೇ, ಇಬ್ಬರು ಜಗಳ ಮಾಡಿಕೊಂಡು ಜನರಿಗೆ ಒಳ್ಳೆದನ್ನ ಮಾಡಲಿ ಸಾಕು ಎಂದು ಹೇಳಿದರು.