ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾದ್ರೆ ಲಾಕ್‍ಡೌನ್: ಸಿಎಂ ಕೇಜ್ರಿವಾಲ್

1 Min Read

ನವದೆಹಲಿ: ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಾದ್ರೆ ಲಾಕ್‍ಡೌನ್ ಘೋಷಣೆ ಮಾಡಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾ ಪ್ರೋಟೋಕಾಲ್ ಎಲ್ಲರೂ ಪಾಲನೆ ಮಾಡಲೇಬೇಕು. ಅಗತ್ಯ ಕೆಲಸಗಳಿದ್ದಾಗ ಮಾತ್ರ ಮಾಸ್ಕ್ ಧರಿಸಿ ಮನೆಯಿಂದ ಹೊರ ಬನ್ನಿ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದೇವೆ. ನವೆಂಬರ್ ನಲ್ಲಿ ಕೊರೊನಾ 8 ಸಾವಿರದವರೆಗೂ ಏರಿಕೆಯಾಗಿತ್ತು. ಆದ್ರೆ ಈಗ ಕೊರೊನಾ 10 ಸಾವಿರದ ಗಡಿ ದಾಟಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.

ದೆಹಲಿಯ ಕೊರೊನಾ ಆ್ಯಪ್ ಲಭ್ಯವಿದ್ದು, ಬೆಡ್‍ಗಳಿರುವ ಆಸ್ಪತ್ರೆ ಮಾಹಿತಿ ಪಡೆಯಬಹುದಾಗಿದೆ. ಬೆಡ್ ಲಭ್ಯವಿರುವ ಆಸ್ಪತ್ರೆಗೆ ನೇರವಾಗಿ ಸೋಂಕಿತರು ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ. ಆದ್ರೆ ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದು, ಅಲ್ಲಿ ಬೆಡ್ ಕೊರತೆ ಇದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಬನ್ನಿ. ಅಲ್ಲಿ ನಿಮಗೆ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೋಂಕು ಕಾಣಿಸಿಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರಾದ್ರೆ ಆಸ್ಪತ್ರೆಗೆ ದಾಖಲಾಗಿದೆ. ಕೊರೊನಾ ಲಕ್ಷಣಗಳಿರದಿದ್ರೆ ಮನೆಗಳಲ್ಲಿಯೇ ವೈದ್ಯರ ಸಲಹೆ ಪಡೆದು ಕ್ವಾರಂಟೈನ್ ಆಗಬಹುದು. ಎಲ್ಲರೂ ಆಸ್ಪತ್ರೆಯತ್ತ ಧಾವಿಸಿದ್ರೆ ಗಂಭೀರ ರೋಗಿಗಳಿಗೆ ಬೆಡ್ ಸಿಗಲ್ಲ. ಒಂದು ವೇಳೆ ಬೆಡ್ ಕೊರತೆಯಾದ್ರೆ ನಮ್ಮ ಮುಂದಿರುವ ಆಯ್ಕೆ ಲಾಕ್‍ಡೌನ್ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಆಸ್ಪತ್ರೆಗಳಲ್ಲಿ ಬೆಸ್ಟ್ ಸರ್ವಿಸ್ ನೀಡಲು ಪ್ರಯತ್ನಿಸಲಾಗುತ್ತಿದೆ. ಹೆಚ್ಚಿನ ವ್ಯಾಕ್ಸಿನ್ ಪೂರೈಸುವಂತೆ ಪ್ರಧಾನಿಗಳಿಗೆ ಪತ್ರ ಬರೆಯಲಾಗಿದ್ದು, ಮನೆ ಮನೆಗಳಿಗೆ ತೆರಳಿ ಲಸಿಕೆ ನೀಡಲು ನಮ್ಮ ಆರೋಗ್ಯ ಸಿಬ್ಬಂದಿ ಸಿದ್ಧವಾಗ್ತಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *