ಹುಬ್ಬಳ್ಳಿ: ನಾವೆಲ್ಲ ಅಪರಾಧವನ್ನು ವಿರೋಧಿಸುತ್ತೇವೆ. ಅಪರಾಧಿಗಳನ್ನಲ್ಲ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಚ್.ಜಿ.ರಾಘವೇಂದ್ರ ಸುಹಾಸ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ವತಿಯಿಂದ 7ನೇ ತಂಡದ ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು. ಇದೇ ವೇಳೆ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥ ಸಂಚಲನದ ಮೂಲಕ ಗೌರವ ಸಮರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಪೊಲೀಸ್ ಮಹಾ ನಿರೀಕ್ಷಕ ಎಚ್.ಜಿ.ರಾಘವೇಂದ್ರ ಸುಹಾಸ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವತಿ ಈಗಾಗಲೇ ಉತ್ತಮ ತರಬೇತಿಯನ್ನು ನೀಡಿದ್ದಾರೆ. ದೇಶಕ್ಕೆ ಬಾರ್ಡರ್ ಎಷ್ಟು ಮುಖ್ಯವೋ ದೇಶದ ಒಳಗೆ ಜೈಲ್ ವಾರ್ಡರ್ ಕೂಡ ಅಷ್ಟೇ ಮುಖ್ಯವಾಗಿದೆ. ನಾವೆಲ್ಲ ಅಪರಾಧವನ್ನು ವಿರೋಧಿಸುತ್ತೇವೆ. ಅಪರಾಧಿಗಳನ್ನಲ್ಲ ಎಂಬುವಂತ ಘೋಷ ವಾಕ್ಯವನ್ನು ಎಲ್ಲ ವಾರ್ಡರ್ಗಳು ಕೂಡ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ರಿವ್ಹೀಜ್ ಆರ್ಡರ್, ರಾಷ್ಟ್ರ ಧ್ವಜ ಹಾಗೂ ಪೊಲೀಸ್ ಧ್ವಜ ಆಗಮನ, ಪ್ರತಿಜ್ಞಾವಿಧಿ ಸ್ವೀಕಾರ, ಧ್ವಜಗಳ ನಿರ್ಗಮನ, ಬಹುಮಾನ ವಿತರಣೆ ಸೇರಿದಂತೆ ಹಲವಾರು ಕಾರ್ಯವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿಗಳಾದ ಕೆ.ರಾಮರಾಜನ್, ಆರ್.ಬಿ.ಬಸರಗಿ ಸೇರಿದಂತೆ ಇತರರು ಉಪಸ್ಥಿತರಾಗಿದ್ದರು.