ಚಿಕ್ಕಮಗಳೂರು: ಎದುರಿಗೆ ಬಂದ ಕಾರನ್ನ ತಪ್ಪಿಸಲು ಹೋಗಿ ಅದೇ ಕಾರಿಗೆ ಉಜ್ಜಿಕೊಂಡು ರಸ್ತೆಯ ಮಧ್ಯದ ಡಿವೈಡರ್ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ರಸ್ತೆಯ ತರಳಬಾಳು ಕಾನ್ವೆಂಟ್ ಬಳಿ ನಡೆದಿದೆ.
ಕಾರು ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಐವರಿಗೂ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನ ತರೀಕೆರೆ ಹಾಗೂ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹೊನ್ನಾಳಿ ರಸ್ತೆಯ ಸಾಸಿವೆಹಳ್ಳಿಯಿಂದ ಐವರು ಫೀಗೋ ಕಾರಿನಲ್ಲಿ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ಹೋಗುವಾಗ ತರೀಕೆರೆಯ ತರಳಬಾಳು ಕಾನ್ವೆಂಟ್ ಬಳಿ ಈ ಅಪಘಾತ ಸಂಭವಿಸಿದೆ.
ಎದುರಿಗೆ ಬಂದ ನಿಸ್ಸಾನ್ ಕಾರನ್ನ ತಪ್ಪಿಸಲು ಹೋಗಿ ಅದೇ ಕಾರಿಗೆ ಒಂದು ಬದಿಯಿಂದ ಉಜ್ಜಿಕೊಂಡು ಹೋಗಿ ಫೀಗೋ ಕಾರು ಪಲ್ಟಿಯಾಗಿದೆ. ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಐವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಿಂಗದಹಳ್ಳಿಯಿಂದ ತರೀಕೆರೆಯ ಈ ಮಾರ್ಗ ನೇರ ರಸ್ತೆಯಾಗಿದ್ದು ಕಾರು ವೇಗವಾಗಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.