ಕಾರವಾರ: ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಕಲ್ಲುಕ್ವಾರಿಯಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದಿದ್ದ ಡಿ.ಬಿ.ಎಲ್ ಕಂಪನಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಕಲ್ಲು ಗಣಿಯಲ್ಲಿ ಸ್ಫೋಟ ನಡೆಸಲು ನಿಷೇಧವಿದ್ದರೂ ಕಲ್ಲು ಗಣಿಗಾರಿಕೆ ಮಾಡುತ್ತಿದೆ. ಇದರಿಂದ 50ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದೆ.
ಸ್ಫೋಟದಿಂದಾಗಿ ರಾಮನಗರದ 50ಕ್ಕೂ ಹೆಚ್ಚು ಮನೆಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಈ ಕುರಿತು ರಾಮನಗದ ನಿವಾಸಿಗಳು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನಧಿಕೃತವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ರಾಮನಗರದ ಹಲವು ಗಣಿ ಭೂಮಿಯಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ: ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು
ಕಳೆದ ಮೂರು ವರ್ಷದ ಹಿಂದ ರಾಮನಗರದಲ್ಲಿ ನಿಗದಿ ಪಡಿಸಿದ ಜಾಗದ ಜೊತೆ ಸರ್ಕಾರಿ ಭೂಮಿಯಲ್ಲೂ ಸಹ ಕಲ್ಲು ಗಣಿಗಾರಿಕೆ ಯನ್ನು ಅಕ್ರಮವಾಗಿ ನಡೆಸಲಾಗುತಿತ್ತು. ಇದರಿಂದಾಗಿ ರಾಮನಗರದ ಸುತ್ತಮುತ್ತಲ ಕೃಷಿ ಭೂಮಿ ಧೂಳಿನಿಂದ ತುಂಬಿ ಕೃಷಿ ಚಟುವಟಿಕೆಗೆ ತೊಂದರೆಯಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಸುದ್ದಿ ಪ್ರಸಾರವಾಗುತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆ ಗಣಿ ಮಾಲೀಕರಿಗೆ ನೋಟಿಸ್ ನೀಡುವ ಜೊತೆ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡಿತ್ತು.
ಈಗ ರಾಮನಗರದಲ್ಲಿ ಗಣಿಗಾರಿಕೆ ಪುನಃ ಪ್ರಾರಂಭವಾಗಿದ್ದು, ಸರ್ಕಾರದ ನಿಯಮದ ಪ್ರಕಾರ ಗಣಿಗಾರಿಕೆ ನಡೆಸಬೇಕಿದ್ದ ಗುತ್ತಿಗೆ ಪಡೆದ ಕಂಪನಿಗಳು ಹೆಚ್ಚು ಲಾಭಕ್ಕಾಗಿ ಇದೀಗ ಮಳೆಗಾಲದಲ್ಲೂ ಹೆಚ್ಚಿನ ಮಟ್ಟದ ಬ್ಲಾಸ್ಟಿಂಗ್ ನಡೆಸುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿರುವ ಮನೆಗಳು ಬಿರುಕು ಬಿಟ್ಟಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಭಯದಲ್ಲೇ ದಿನ ದೂಡುವಂತೆ ಮಾಡಿದೆ.
ಇನ್ನು ಅಕ್ರಮ ಬ್ಲಾಸ್ಟಿಂಗ್ ಮಾಡುತ್ತಿರುವ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂದಾಯ ಇಲಾಖೆಯಾಗಲಿ, ಪರಿಸರ ಇಲಾಖೆಯಾಗಲಿ ದೂರು ನೀಡಿದರೂ ಇತ್ತ ಬಾರದೇ ಜಾಣ ಮೌನ ವಹಿಸಿದೆ. ಈ ಭಾಗದಲ್ಲಿ ಬ್ಲಾಸ್ಟಿಂಗ್ ಹೆಚ್ಚಾದಲ್ಲಿ ಸ್ಥಳೀಯ ಗ್ರಾಮದ ಹಲವು ಮನೆಗಳು ಬೀಳುವ ಆತಂಕ ಸಹ ಇದೆ.