ಶಿವಮೊಗ್ಗ: ಕೊರೊನಾ ಸೋಂಕಿನ ಈ ಬಿಕ್ಕಟ್ಟಿನ ಸಮಯದಲ್ಲಿ ಅಂಬ್ಯುಲೆನ್ಸ್ ಚಾಲಕರು ಹಣ ಮಾಡುತ್ತಿದ್ದಾರೆ ಎನ್ನು ಆರೋಪ ಕೇಳಿಬರುತ್ತಿದೆ. ಇದಕ್ಕೇ ಪೂರಕವಾಗಿ ಇದೀಕ ಅಂಬ್ಯುಲೆನ್ಸ್ ಚಾಲಕನ ಆಕ್ಸಿಜನ್ ಇದೆ ಎಂದು ಹೇಳಿರುವ ಸುಳ್ಳಿಗೆ ಸೋಂಕಿತ ಮಹಿಳೆ ಬಲಿಯಾಗಿದ್ದಾರೆ.
ಚಾಲಕನೋರ್ವ ತನ್ನ ಅಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಇದೆ ಅಂತ ಸುಳ್ಳು ಹೇಳಿಕೊಂಡು ಸುಮಾರು 60 ವರ್ಷದ ಸೋಂಕಿತ ಮಹಿಳೆಯೊಬ್ಬರನ್ನು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾನೆ. ಆದರೆ ಮಹಿಳೆ ಅಸ್ಪತ್ರೆಗೆ ಸೇರುವ ಮುಂಚೆಯೇ ಪ್ರಾಣ ಬಿಟ್ಟಿದ್ದಾರೆ.
ನಿನ್ನೆ ಭದ್ರಾವತಿಯ ಕೊರೊನಾ ಸೋಂಕಿತ ಮಹಿಳೆಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಭದ್ರಾವತಿಯಿಂದ ಶಿವಮೊಗ್ಗದ ಸುಬ್ಬಯ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವರ ಕುಟುಂಬಸ್ಥರು ಕರೆದುಕೊಂಡು ಬರುತ್ತಿದ್ದರು.
ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆ ಇದ್ದದ್ದರಿಂದ ಮಹಿಳೆಯನ್ನು ಆಕ್ಸಿಜನ್ ಇರುವ ಅಂಬ್ಯುಲೆನ್ಸ್ನಲ್ಲಿ ಸಾಗಿಸಬೇಕಿತ್ತು. ಅಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಇಲ್ಲದಿದ್ದರೂ ಅಂಬ್ಯುಲೆನ್ಸ್ ಚಾಲಕ ಆಕ್ಸಿಜನ್ ಇದೆ ಎಂದು ನಂಬಿಸಿ ಕರೆದುಕೊಂಡು ಬಂದಿದ್ದಾನೆ. ಆದರೆ ಆಕ್ಸಿಜನ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಕೆಎ 02 ಜಿ 3654 ಸಂಖ್ಯೆಯ ಭದ್ರಾವತಿಯ ಸರಕಾರಿ ಆಸ್ಪತ್ರೆಗೆ ಸೇರಿದ ಅಂಬ್ಯುಲೆನ್ಸ್ ಇದು ಎಂದು ತಿಳಿದು ಬಂದಿದೆ. ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿಯೇ ಈ ಅವ್ಯವಸ್ಥೆ ಇದ್ದರೂ ಏನೂ ಆಗಿಲ್ಲವೆಂದು ಹೇಳಿಕೊಂಡು ಓಡಾಡುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಈ ಸಾವು ಕೇವಲವಾಗಿದೆ ಅಷ್ಟೇ. ಆಕ್ಸಿಜನ್ ಇದೆ ಎಂದು ಕರೆದುಕೊಂಡು ಬಂದಿದ್ದ ಚಾಲಕನಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಲಕನ ಒಂದು ಸುಳ್ಳಿಗೆ ಅಮಾಯಕ ಜೀವವೊಂದು ಬಲಿಯಾದಂತಾಗಿದೆ.