ಮಂಡ್ಯ: ಪ್ರೀತಿ ಮಾಡುತ್ತಿದ್ದ ಜೋಡಿಗೆ ಮದುವೆ ಮಾಡಿಸಿದ್ದ ಯುವಕನ್ನನ್ನು ಆತನ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಂಡ್ಯದ ಕಲ್ಲಹಳ್ಳಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ರಕ್ಷಿತ್ (21) ಕೊಲೆಯಾದ ಯುವಕನಾಗಿದ್ದಾನೆ. ರಕ್ಷಿತ್ ಕಳೆದ ಒಂದು ತಿಂಗಳ ಹಿಂದೆ ಪ್ರೀತಿ ಮಾಡುತ್ತಿದ್ದ ತನ್ನ ಸ್ನೇಹಿತನಿಗೆ ಮದುವೆ ಮಾಡಿಸಿರುತ್ತಾನೆ. ಇದೇ ವಿಚಾರಕ್ಕೆ ತನ್ನ ಸ್ನೇಹಿತರ ಗ್ಯಾಂಗ್ನಲ್ಲಿ ಸಣ್ಣ-ಪುಟ್ಟ ಗಲಾಟೆಯಾಗಿರುತ್ತದೆ. ಶನಿವಾರ ರಕ್ಷಿತ್ ಹಾಗೂ ಸ್ನೇಹಿತರು ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಟ್ರಾಕ್ ಬಳಿ ಪಾರ್ಟಿ ಮಾಡುತ್ತಿರುತ್ತಾರೆ. ಈ ವೇಳೆ ಈ ಹಿಂದೆ ರಕ್ಷಿತ್ ಮದುವೆ ಮಾಡಿಸಿದ ವಿಚಾರ ಪ್ರಸ್ತಾಪವಾಗುತ್ತದೆ. ಬಳಿಕ ಪರಸ್ಪರ ಮಾತಿಗೆ ಮಾತು ಬೆಳೆದಿದ್ದು, ರಕ್ಷಿತ್ ಸುತ್ತ ಇದ್ದ ಸ್ನೇಹಿತರು ಮಾರಕಾಸ್ತ್ರದಿಂದ ರಕ್ಷಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು
ಅಲ್ಲಿಂದ ತಪ್ಪಿಸಿಕೊಂಡು ರಕ್ಷಿತ್ ಕಲ್ಲಹಳ್ಳಿ ಬಡಾವಣೆಯ ಮನೆಯೊಂದರ ಕಾಂಪೌಂಡ್ ಬಳಿ ಅವಿತುಕೊಳ್ಳುತ್ತಾನೆ. ಬಳಿಕ ರಕ್ತದ ಮಡುವಿನಲ್ಲಿ ಬಿದಿದ್ದ ರಕ್ಷಿತ್ನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ರಕ್ಷಿತ್ನನ್ನು ಆಸ್ಪತ್ರೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ರಕ್ಷಿತ್ ಸಾವನ್ನಪ್ಪಿದ್ದಾನೆ. ಈ ಹಿಂದೆ ರಕ್ಷಿತ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರಣ ಈತನ ಮೇಲೆ ಪೊಲೀಸರು ರೌಡಿ ಶೀಟರ್ ಸಹ ಓಪನ್ ಮಾಡಿದ್ದರು. ಇದೀಗ ರಕ್ಷಿತ್ ಮರ್ಡರ್ ವಿಚಾರವಾಗಿ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಶಂಕೆ- ಮಗ ಸಾವು