ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟಿಂಗ್ ಮಾಡುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಘಟನೆ ನಗರದ ಕೆಆರ್ ಪುರಂನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಮುನೇಶ್ವರ ನಗರದಲ್ಲಿ ನಡೆದಿದೆ.
ಉತ್ತರ ಭಾರತದ ಮೂಲದ ಶೈಲೇಶ್ (25) ಗಾಯಗೊಂಡಿರುವ ಯುವಕ. ಆಂಧ್ರಪ್ರದೇಶ ಮೂಲದ ವಿಜಯಕುಮಾರ್ ಎಂಬವರು ಹೈಟೆನ್ಷನ್ ತಂತಿ ಹಾದು ಹೋಗಿದ್ದ ಮನೆಯ ಕೆಳಗೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದರು. ಕಟ್ಟಡ ಕಾಮಗಾರಿ ಮುಗಿದಿದ್ದು, ಪೇಂಟಿಂಗ್ ಕಾರ್ಯ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ.
ಹೈಟೆನ್ಷನ್ ತಂತಿಯಿಂದ ಹರಿದ ವಿದ್ಯುತ್ ನಿಂದ ಮನೆಯಲ್ಲಿದ್ದ ಟಿವಿ, ಸ್ವಿಚ್ ಬೋರ್ಡ್ ಸೇರಿದಂತೆ ವೈರ್ ಗಳು ಸುಟ್ಟು ಹೋಗಿವೆ. ಅಕ್ಕ- ಪಕ್ಕದ ಕೆಲ ಮನೆಗಳಿಗೂ ಹಾನಿಯಾಗಿದೆ. ಇಂದು ಸುಮಾರು 12 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಶೇ. 60 ರಷ್ಟು ಸುಟ್ಟಗಾಯಗಳಿಂದ ಕೆಳಗೆ ಬಿದ್ದು ನರಳುತ್ತಿದ್ದ ಯುವಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹೈಟೆಕ್ಷನ್ ತಂತಿ ಹಾದು ಹೋಗಿರುವ ಅಕ್ಕ ಪಕ್ಕದಲ್ಲಿ ಮನೆ ನಿರ್ಮಾಣ ಮಾಡಬಾರದು ಎಂಬ ನಿಯಮವನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನು ಮನೆಯ ಮಾಲೀಕ ಹಾಗೂ ಕೆಲ ಅಧಿಕಾರಗಳ ಬೇಜವಾಬ್ದಾರಿಯಿಂದ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.