ಶಿವಮೊಗ್ಗ: ಕೆಳದಿ ಅರಸನಾಗಿದ್ದ ವೆಂಕಟಪ್ಪ ನಾಯಕರ ಪ್ರೇಯಸಿ ಚಂಪಕ ಎಂಬವರ ಸವಿನೆನಪಿಗಾಗಿ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಿರ್ಮಿಸಿದ್ದ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ಕಲ್ಯಾಣಿಗೆ ಚಂಪಕ ಸರಸ್ಸು ಕಲ್ಯಾಣಿ ಅಥವಾ ಕೊಳ ಎಂದು ಸಹ ಕರೆಯಲಾಗುತ್ತದೆ. ಇದಕ್ಕೆ ಚಂದನವನದ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಪುನರುಜ್ಜೀವನಕ್ಕೆ ಚಾಲನೆ ನೀಡಲಾಗಿದೆ.
ಈ ಸುಂದರ ಕಲ್ಯಾಣಿಯನ್ನು ನಟ ಯಶ್ ನಡೆಸುತ್ತಿರುವ ಯಶೋಮಾರ್ಗ ತಂಡ ಅಭಿವೃದ್ಧಿಪಡಿಸಲು ಮುಂದೆ ಬಂದಿದೆ. ಈ ಸುಂದರ ಕಲ್ಯಾಣಿ ಇಂದು ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಕಲ್ಯಾಣಿಯನ್ನ ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣಿ ಸುತ್ತ ಕಲ್ಲಿನಲ್ಲಿ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಕಲ್ಯಾಣಿಯ ಮಧ್ಯದಲ್ಲಿ ಶಿವನ ಸಣ್ಣ ಮಂದಿರ ಸಹ ಇದೆ. ಮಂದಿರಕ್ಕೆ ತೆರಳಲು ಕಲ್ಲಿನ ದಾರಿ ಇದೆ. ಕಲ್ಯಾಣಿಯ ಪ್ರವೇಶದಲ್ಲಿ ಕಲ್ಲಿನ ಆನೆಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ನನ್ನು ಹಾಡಿ ಹೊಗಳಿದ ನಟಿ ಪೂಜಾ ಹೆಗ್ಡೆ
ಈ ಸುಂದರ ಕಲ್ಯಾಣಿಯನ್ನು ಯಶೋಮಾರ್ಗ ತಂಡ ಹೈದರಾಬಾದ್ ಮೂಲದ ‘ಫ್ರೀಡಂ ಆಯಿಲ್ ಅಸೋಸಿಯೇಷನ್’ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಚಂಪಕ ಸರಸ್ಸು ಅಭಿವೃದ್ದಿಗೆ ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು.
ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಹಿಂದೆ ರಾಜ್ಯದ ಕೆರೆಗಳ ಅಭಿವೃದ್ಧಿ ಕುರಿತು ಯಶ್ ಅವರ ಜೊತೆ ಚರ್ಚೆ ಮಾಡುವಾಗ ಚಂಪಕ ಸರಸ್ಸು ಕಲ್ಯಾಣಿ ನೋಡಿದ್ದರು. ಈಗ ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ಧಿಪಡಿಸಲು ಮುಂದಾಗಿರುವುದು ಖುಷಿಯ ವಿಚಾರ ಎಂದರು.
ಕಲ್ಯಾಣಿಯ ಪುನರುಜ್ಜೀವನದಲ್ಲಿ ಸುತ್ತಲು ಜಾಗದ ಸ್ವಚ್ಛತೆ, ಪುರಾತನ ಕಟ್ಟೆ ಮೇಲಿನ ಮರ, ಗಿಡಗಳನ್ನು ತೆಗೆದು ದುರಸ್ಥಿ ಮಾಡುವುದು. ಸುತ್ತಲು ಬೇಲಿ ನಿರ್ಮಿಸುವುದು, ಗೇಟ್ ಅಳವಡಿಸುವುದು ಹಾಗೂ ಕಲ್ಯಾಣಿ ಕುರಿತ ಫಲಕ ಹಾಕುವುದು. ಹೀಗೆ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಯಶೋಮಾರ್ಗ ಯೋಜನೆ ರೂಪಿಸಿದೆ. ಇದನ್ನೂ ಓದಿ: ರಾಜಕೀಯ ಮಾಡಲು ಸಿದ್ದರಾಮಯ್ಯ, ಹೆಚ್ಡಿಕೆಗೆ ವಿಷಯಗಳೇ ಸಿಗ್ತಿಲ್ಲ: ಶಿವರಾಜ್ ಪಾಟೀಲ್