ರಾಯಚೂರು: ಆರ್ಎಸ್ಎಸ್ ಒಂದು ರಾಷ್ಟ್ರ ಸೇವೆ ಮಾಡೋ, ರಾಷ್ಟ್ರ ಭಕ್ತಿಯ ಸಂಘ. ರಾಜಕೀಯ ಮಾಡೋದಕ್ಕೆ ಬೇರೆ ವಿಷಯ ಸಿಕ್ಕಿಲ್ಲ. ಹೀಗಾಗಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಿಡಿಕಾರಿದರು.
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಟೀಕೆ ವಿಚಾರದ ಬಗ್ಗೆ ತಿರುಗೇಟು ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಆರ್ಎಸ್ಎಸ್ ಅವರು ಹೆಣ ಹೊತ್ತಿದ್ದಾರೆ. ಜನರ ಸೇವೆ ಮಾಡಿದ್ದಾರೆ. ಕಿಟ್ ಗಳನ್ನ ಹಂಚಿದ್ದು, ಭಿಕ್ಷುಕರಿಗೆ ಊಟ ಕೊಟ್ಟು, ಮಾಸ್ಕ್ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಲೈಂಗಿಕ ಕಿರುಕುಳವಾಗಿತ್ತು: ನೀನಾ ಗುಪ್ತಾ
ಬಿಜೆಪಿ ಮೇಲೆ ಆರೋಪ ಮಾಡಿದ್ದು, ಸಾಕಾಗಿ ಈಗ ಆರ್ಎಸ್ಎಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಷ್ಟ್ರ ಸೇವೆಗಾಗಿ ಸದಾ ಸಿದ್ಧ ಇರುವ ಒಂದು ಸಂಘ ಆರ್ಎಸ್ಎಸ್. ರಾತ್ರಿ 12 ಗಂಟೆಗೆ ಬೇಕಾದ್ರೆ 1 ಲಕ್ಷ ಜನ ಆರ್ಎಸ್ಎಸ್ ಕಾರ್ಯಕರ್ತರು ಸಿದ್ಧ ಇರಬೇಕು ಅಂದ್ರೆ ಬರ್ತಾರೆ. ಅಂತಹ ಸಂಘವನ್ನ ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದ ಲೂಟಿಯಲ್ಲಿ ಸಿಎಂ ಬೊಮ್ಮಾಯಿ ಪಾಲುದಾರಿಕೆ ವಿಚಾರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರೇ ಇದ್ದರು. ಸದನದಲ್ಲಿ ಸಿದ್ದರಾಮಯ್ಯ ಏಕೆ ಬಾಯಿಮುಚ್ಚಿಕೊಂಡು ಕುಳಿತ್ತಿದ್ದರು. ಅಷ್ಟು ಹಗರಣಗಳು ಆಗಿದ್ರೆ, ಇವರು ಏಕೆ ಕಣ್ಣುಮುಚ್ಚಿಕೊಂಡು ಕುಳಿತಿದ್ದರು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಹೆಬ್ಬೆಟ್ಗಿರಾಕಿ ಮೋದಿ ತನ್ನ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ: ಕಾಂಗ್ರೆಸ್
ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಯಾವುದೇ ಹಗರಣ ನಡೆದಿಲ್ಲ. ಎಲ್ಲ ಕಾಮಗಾರಿಗಳು ಪಾರದರ್ಶಕತೆಯಿಂದ ಆಗಿವೆ. ಯಾವುದೇ ವಿಷಯ ಸಿಗದೇ ಇರುವಾಗ ಭ್ರಷ್ಟಾಚಾರ ವಿಷಯದ ಬಗ್ಗೆ ಮಾತನಾಡುತ್ತಾರೆ. ಫ್ರೀಯಾಗಿ ಸಿಗುವ ವಿಷಯ ಏನಾದರೂ ಇದ್ರೆ ಅದು ಭ್ರಷ್ಟಾಚಾರ ಒಂದೇ ಆಗಿದೆ. ನಮ್ಮ ಸರ್ಕಾರ ಪಾರದರ್ಶಕತೆಗೆ ಎತ್ತಿದ ಕೈ ಎಂದು ತಿರುಗೇಟು ನೀಡಿದರು.