ಮಂಡ್ಯ: ಯುಗಾದಿ ಹಬ್ಬದ ಬ್ರೇಕ್ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಪ್ರಚಾರಕ್ಕೆ ಇಳಿದಿದ್ದು, ಇಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.
ಅಂಬರಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಯಾವುದೇ ಕನ್ ಫ್ಯೂಶನ್ ಇಲ್ಲ. ಯಾಕಂದ್ರೆ ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಜನರ ಮುಗ್ಧತೆಯನ್ನ ಮಿಸ್ಯೂಸ್ ಮಾಡಿಕೊಳ್ಳಬಾರದು ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಬಿಜೆಪಿ ಸುಮಲತಾಗೆ ಬೆಂಬಲವನ್ನು ನೀಡುತ್ತಿದೆ. ಹೀಗಾಗಿ ಮೋದಿ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ಮೋದಿಯನ್ನ ಭೇಟಿ ಮಾಡಲ್ಲ. ಅವರ ಭೇಟಿ ಬಗ್ಗೆ ನಮ್ಮ ಅಭ್ಯರ್ಥಿ ಸುಮಲತಾ ಅಂಬರೀಶ್ ನಿರ್ಧರಿಸುತ್ತಾರೆ ಎಂದರು.
ಹಳ್ಳಿ ಹಳ್ಳಿಗೂ ಹೋಗಿ ನಮ್ಮ ಕರ್ತವ್ಯದಂತೆ ನಾವು ಪ್ರಚಾರ ಮಾಡುತ್ತಿದ್ದೇವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಕರ್ತವ್ಯದ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅಭ್ಯರ್ಥಿ ಏನು ಮಾಡಿದ್ದಾರೆ. ಅವರ ಅಭಿವೃದ್ಧಿ ಏನು ಮಾಡುತ್ತಾರೆ. ಇದಕ್ಕಾಗಿ ಅವರ ಯೋಜನೆಗಳು ಏನು ಎಂಬುದರ ಬಗ್ಗೆ ಅವರು ಮಾತಾಡುತ್ತಾರೆ. ಹೀಗಾಗಿ ನಾನು ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕಿಂತ ಅವರು ಮಾತನಾಡುವುದೇ ಸೂಕ್ತ ಎಂದು ಯಶ್ ಹೇಳಿದ್ರು.
ಸುಮಲತಾ ಅವರು ಸುಮ್ಮನೆ ಹಿಂಗೆ ಬಂದು ಹಿಂಗೆ ಹೋಗುವವರು ಅಲ್ಲ. ಬಹಳಷ್ಟು ದಿನ ಉಳಿಯುತ್ತಾರೆ. ಇಲ್ಲಿ ಕೆಲಸಗಳನ್ನು ಮಾಡುತ್ತಾರೆ. ಜನರ ಪ್ರೀತಿ ಗಳಿಸೋದಕ್ಕೆ ಅಂತಾನೇ ಅವರು ಬಂದಿದ್ದಾರೆ. ಅಮೆರಿಕದಂತೆ ಇಲ್ಲಿಯೂ ಅಭ್ಯರ್ಥಿಗಳಿಬ್ಬರನ್ನು ನಿಲ್ಲಿಸಿ ಒಂದು ವೇದಿಕೆ ಕ್ರಿಯೇಟ್ ಮಾಡಿ. ಆವಾಗ ಯಾರು ಏನೇನು ಯೋಜನೆಗಳನ್ನಿಟ್ಟುಕೊಂಡಿದ್ದಾರೆ. ಯಾರು ಎಷ್ಟು ಯೋಜನೆಗಳನ್ನು ಇಟ್ಟುಕೊಂಡು ಅದರ ಬಗ್ಗೆ ಆಸಕ್ತಿ, ಶಕ್ತಿ, ಜ್ಞಾನ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಲಹೆ ನೀಡಿದ ಅವರು, ಮಂಡ್ಯದ ಯುವಕರು ಬೇರೆ ಬೇರೆ ಕಡೆ ಕೆಲಸಕ್ಕೆಂದು ತೆರಳುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬಂತೆ ಸಾಕಷ್ಟು ಪತ್ರಗಳು ಬಂದಿದೆ. ಅಲ್ಲದೇ ಮಂಡ್ಯದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದೆ. ಇವುಗಳನ್ನೆಲ್ಲಾ ಸುಮಲತಾ ಅಂಬರೀಶ್ ಮಾಡುತ್ತಾರೆ ಎಂದು ಭರವಸೆ ನೀಡಿದರು.