ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ಮದುವೆ ವಾರ್ಷಿಕೋತ್ಸವವಾಗಿದೆ. ಆದರೆ ಇಂದೇ ತಮ್ಮ ಮುದ್ದಿನ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್, ಅಂದಿನ ದಿನ ನಾನು ಬೇರೆ ಕೆಲಸದಲ್ಲಿದ್ದೆ. ಆದ್ದರಿಂದ ನಾನು ಬಂದು ಯಾರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಆದರೆ ನೀವು ನಮ್ಮ ಮಾತಿಗೆ ಗೌರವ ಕೊಟ್ಟಿದ್ದೀರಿ. ಆದ್ದರಿಂದ ಮೊದಲೇಯದಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಮಾಧ್ಯಮದವರಿಗೆ ತಿಳಿಸಿದರು.
ನನ್ನ ಜೀವನದಲ್ಲಿ ಇದೊಂದು ಸ್ಪೆಷಲ್ ಅನುಭವವಾಗಿದೆ. ನಾವು ನಟರು, ಯಾವುದೇ ಭಾವನೆಗಳಿದ್ದರು ಅದನ್ನು ಎಕ್ಸ್ ಪ್ರೆಸ್ ಮಾಡುವುದೇ ನಮ್ಮ ಕೆಲಸವಾಗಿದೆ. ಆದರೆ ಈ ಭಾವನೆ, ಅನುಭವವನ್ನು ಹೇಳಿಕೊಳ್ಳುವ ಶಕ್ತಿ ಇಲ್ಲ. ಅದು ಸಾಧ್ಯನೂ ಇಲ್ಲ, ಇದೆಲ್ಲವನ್ನು ಮೀರಿದ ಅನುಭವವಾಗಿದ್ದು, ತುಂಬಾ ಖುಷಿಯಾಗಿದೆ ಎಂದು ಯಶ್ ಹೇಳಿದರು.
ಹೆಣ್ಣು ಮಕ್ಕಳು ಅಂದರೆ ನಮಗೆ ತುಂಬಾ ತುಂಬಾ ಆಸೆ ಇತ್ತು. ಆ ದೇವರು ಹೆಣ್ಣು ಮಗುವನ್ನೇ ಕೊಟ್ಟಿದ್ದು, ನನ್ನ ಆಸೆ ನೆರವೇರಿದೆ. ಆದ್ದರಿಂದ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಅಪ್ಪ-ಅಮ್ಮ ಮೊಮ್ಮಗಳನ್ನು ನೋಡಿದಾಗ ಪಟ್ಟ ಖುಷಿಗೆ ಬೆಲೆ ಕಟ್ಟೋಕೆ ಹಾಗಲ್ಲ. ಇಬ್ಬರು ಆರೋಗ್ಯವಾಗಿದ್ದಾರೆ, ಎಲ್ಲರೂ ಖುಷಿಯಾಗಿದ್ದೇವೆ ಎಂದು ಹೇಳಿದರು.
ಆಸ್ಪತ್ರೆಯ ಎಲ್ಲಾ ಸಿಬ್ಬಂದಿ, ವೈದ್ಯರು ಕಾಳಜಿಯಿಂದ ಚೆನ್ನಾಗಿ ನೋಡಿಕೊಂಡಿದ್ದಾರೆ. ಅಭಿಮಾನಿಗಳು ವಿಶ್ ಮಾಡಿದ್ದರು. ಆದರೆ ನಾನು ಯಾರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಕೈಮುಗಿದರು. ಈ ವೇಳೆ ರಾಧಿಕಾ ಅವರು ಮಗು ಅವರ ಅಪ್ಪ ಯಶ್ ತರಹ ಇದೆ. ನನ್ನ ಯಾವುದೇ ಲಕ್ಷಣವೂ ಇಲ್ಲ ಎಂದು ಖುಷಿಪಟ್ಟು ಹೇಳಿದರು.
ಸದ್ಯಕ್ಕೆ ಇಂದು ಸಂಜೆ ಮತ್ತೆ ನಾನು ಹೈದರಾಬಾದ್ ಹೋಗುತ್ತಿದ್ದೇನೆ. ಮಗುವಿನ ಹೆಸರಿನ ಬಗ್ಗೆ ಚರ್ಚೆ ಮಾಡಿಲ್ಲ. ನಾಮಕರಣ ದಿನದಂದೂ ಹೆಸರು ಹೇಳುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ಮಗಳಿಗಾಗಿ ಅಂಬರೀಶ್ ತೊಟ್ಟಿಲು ಮಾಡಿಸಿದ್ದ ಬಗ್ಗೆ ಮಾತನಾಡಿದರು.
ಇಂದು ನಮ್ಮಿಬ್ಬರ ಜೀವನದಲ್ಲಿ ಹೊಸ ಪ್ರಯಾಣವಾಗಿದೆ. ಅದರಲ್ಲೂ ನಾನು ಮುಖ್ಯವಾದ ಪಾತ್ರ ಮಾಡುತ್ತಿದ್ದೇನೆ. ಇಂದು ನಮ್ಮ ಮದುವೆ ವಾರ್ಷಿಕೋತ್ಸವದ ದಿನವಾಗಿದೆ. ನಾನು ಗರ್ಭಿಣಿಯಾಗಿನಿಂದ ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ. ಮಗುವಾದಾಗ ಹೇಗೆ ಎತ್ತಿಕೊಳ್ಳಬೇಕು ಎಂದು ಗೊತ್ತಿರಲಿಲ್ಲ, ಭಯವಾಗುತ್ತಿತ್ತು. ಆಗ ಅಮ್ಮ ಹೇಳಿಕೊಟ್ಟರು. ಎಲ್ಲವೂ ನನ್ನ ಜೀವನದಲ್ಲಿ ಒಂದೊಂದು ಅನುಭವವಾಗುತ್ತಿದೆ ಎಂದು ರಾಧಿಕಾ ಹೇಳಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv