ನವದೆಹಲಿ: ಎಸ್ಸಿ (SC) ಸಮುದಾಯಕ್ಕೆ ಸೇರಿದ ಹಾಗೂ ಕ್ರೈಸ್ತ (Christians), ಇಸ್ಲಾಂ (Muslims) ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ (Reservation) ಸೌಲಭ್ಯ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಸಮಿತಿ ವರದಿ ಕೊಡುವವರೆಗೂ ಕಾಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ (Central Government) ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.
ಮತಾಂತರಗೊಂಡ (Conversion) ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಬೇಕೇ ಅಥವಾ ಬೇಡವೇ ಎಂಬ ಕುರಿತು ತ್ರಿಸದಸ್ಯ ಆಯೋಗದ ವರದಿಗಾಗಿ ಕಾಯಬೇಕು ಎಂದು ಸುಪ್ರೀಂಗೆ ಕೇಂದ್ರ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಸುಮಾರು 20 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ವಿವಾದವನ್ನು ಶೀಘ್ರವೇ ನಿರ್ಣಯಿಸಲು ನಿರ್ಧರಿಸಲಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: DMK ಸರ್ಕಾರಕ್ಕೆ ಹಿನ್ನಡೆ – ತಮಿಳುನಾಡಿನಲ್ಲಿ RSSಗೆ ರ್ಯಾಲಿ ಅನುಮತಿ
ಇತರ ಧರ್ಮಗಳಿಗೆ ಮತಾಂತರಗೊಂಡಿದ್ದರೂ ಕೆಲವರು ಎಸ್ಸಿ ಮೀಸಲಾತಿ ಸೌಲಭ್ಯವನ್ನೇ ಪಡೆಯುತ್ತಿದ್ದಾರೆ. ಅಂತಹವರಿಗೆ ಮೀಸಲಾತಿ ಸೌಲಭ್ಯ ನೀಡಬಹುದೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ಸಿಜೆಐ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತ್ತು.
ಸಮಿತಿ ಸಂಗ್ರಹಿಸಿದ ಪ್ರಾಯೋಗಿಕ ದತ್ತಾಂಶಕ್ಕಾಗಿ ನ್ಯಾಯಾಲಯವು ಕಾಯಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೀಠವು, ನಾಳೆ ಬೇರೆ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬಹುದು. ಅವರು ಹೊಸ ವರದಿಯನ್ನು ಹೇಳಬಹುದು. ಹೀಗಾಗಿ ನಿಮ್ಮ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ. ಎಷ್ಟು ಸಮಿತಿಗಳನ್ನು ನೇಮಿಸುತ್ತೀರಿ? ಕಾಲಮಿತಿಯೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ರೋಹಿಣಿ ಜೊತೆ ಕಿತ್ತಾಟ – ಮಾತನಾಡದಂತೆ ರೂಪಾಗೆ ನೀಡಿದ್ದ ತಡೆ ತೆರವು
ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್ಸಿ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಕೇಂದ್ರವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.