-ಚುನಾವಣೆ ಮುಗಿತಲ್ಲ ಇನ್ಮುಂದೇ ನಾವೇ ನಿಮಗೆ ಕೈ ಮುಗಿಬೇಕು
ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ಸಿಂಧಗಿ ಪಟ್ಟಣದ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿಂಧಗಿ ಪಟ್ಟಣಕ್ಕೆ ಇಂದು ಸಚಿವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಚಿವರ ಬಳಿ ಬಂದು ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಲತಿಬಾ ತಾಂಬೆ ಹಾಗೂ ಕೆಲವು ಮಹಿಳೆಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣೆ ಇದ್ದಾಗ ನೀವು ಕೈಮುಗಿದುಕೊಂಡು ಬರತ್ತಿರಿ, ಈಗ ನಾವು ಕೈ ಮುಗಿದು ಕೆಲಸ ಕೇಳುವ ಪರಿಸ್ಥಿತಿ ಬಂದಿದೆ. ನಾವು ಮತ ಹಾಕುವವರಿಗೆ ಮಾತ್ರ ನಮ್ಮನ್ನು ಮಾತನಾಡಿಸುತ್ತೀರಾ ಆಮೇಲೆ ನಮ್ಮ ಸಮಸ್ಯೆ ಕೇಳುವುದಿಲ್ಲ. ಪಟ್ಟಣದಲ್ಲಿ ರಸ್ತೆಯ ಧೂಳು ಕುಡಿದು ತಿರುಗಾಡುತ್ತಿದ್ದೇವೆ. ಕುಡಿಯಲು ನೀರಿಲ್ಲ ಎಂದು ಲತಿಬಾ ತಾಂಬೆ ಕಿಡಿಕಾರಿದರು.
ಸಚಿವರ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿ ಉತ್ತರ ನೀಡುತ್ತಿದ್ದಂತೇ, ನೀವು ಸುಮ್ಮನೆ ನಿಲ್ಲಿ. ಸಚಿವರು ಉತ್ತರ ನೀಡಲಿ ಎಂದು ಮಹಿಳೆ ಗರಂ ಆಗಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಚಿವರು ಸರಿ ಮಾಡಿಸುತ್ತೇನೆ ಎನ್ನುತ್ತಲೇ ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.
ಇದಕ್ಕೂ ಮುನ್ನ ದೇವರನೆದಲಗಿ ಗ್ರಾಮ ಪಂಚಾಯತ್ನಲ್ಲಿ ಹಗರಣ ನಡೆದಿದೆ ಎಂದು ಕೆಲವು ಸಿಂಧಗಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಸುಮಾರು 70ರಿಂದ 80 ಲಕ್ಷ ರೂ. ಕಳಪೆ ಕಾಮಗಾರಿಗಳು ನಡೆದಿವೆ. ಈ ಕುರಿತು ಸಂಪೂರ್ಣ ತನಿಖೆ ಆಗುವವರಗೂ ನಾನು ಪ್ರತಿಭಟನೆ ಮಾಡುತ್ತೇವೆ. ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಮೇಲೆ ಅಧಿಕಾರಿಗಳು ಹಾಗೂ ನಾಯಕರು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಒಂದೇ ಜಿಲ್ಲೆಗೆ ಮೀಸಲಾಗಿಲ್ಲ. ನನಗೆ 30 ಜಿಲ್ಲೆಗಳ ಜವಾಬ್ದಾರಿಯಿದೆ. ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv