ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹವಾಲು ಸಲ್ಲಿಕೆ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕಿ ಗೋಳಾಡಿದ ಘಟನೆ ಗುರುವಾರ ನಡೆದಿದೆ.
ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದ ನಿವಾಸಿ ಸಾವಿತ್ರಿ ಟೆಂಗೇರ್ ಅವರು ಆಶ್ರಯ ಯೋಜನೆಯಡಿ ಮನೆ ಕೊಡಿಸಿ. ನಮ್ಮ ಗೋಳು ಕೇಳೋರು ಯಾರೂ ಇಲ್ಲ ಎಂದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿಂದ ಮನೆ ನೀಡುತ್ತಿಲ್ಲ. ಈ ಹಿಂದೆಯೂ ನಿಮ್ಮನ್ನು ಭೇಟಿಯಾಗಿದ್ದೆ ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಸುಮಾರು ಮೂರು ತಿಂಗಳ ಬಳಿಕ ಬಾದಾಮಿಗೆ ಆಗಮಿಸಿದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯಗೆ ಅಹವಾಲು ಸಲ್ಲಿಸಲು ಕ್ಷೇತ್ರದ ಜನರು ಮುಗಿಬಿದ್ದರು. ಬಾದಾಮಿ ಪಟ್ಟಣ ಶಾಸಕರ ಗೃಹಕಚೇರಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಬಾದಾಮಿ ತಾಲೂಕಿನ ಮಲ್ಲಾಪುರ ಎಸ್ ಎಲ್ ಗ್ರಾಮದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಗ್ರಾಮಕ್ಕೆ ಸಂಚರಿಸಲು ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಿಂದ ಗ್ರಾಮಕ್ಕೆ 2 ಕಿ.ಮೀ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟರು.