ಹಾಸನ: ನಾಲ್ಕು ದಿನಗಳ ಹಿಂದೆ ಗಂಡನಿಂದಲೇ ಹತ್ಯೆಯಾಗಿರುವ ಮಹಿಳೆಯ ಸಾವಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿ ಮೃತ ಸಂಬಂಧಿಕರು ಇಂದೂ ಸಹ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ.
ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ನಂದಿನಿಯನ್ನು(36) ಆಕೆಯ ಗಂಡ ಮೋಹನ್ ಕುಮಾರ್ ಕೊಲೆ ಮಾಡಿ ನಂತರ ವೇಲ್ ನಲ್ಲಿ ನೇಣು ಹಾಕಿ ಪರಾರಿಯಾಗಿದ್ದ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮೋಹನ್ ಕುಮಾರ್ ಸ್ವಗ್ರಾಮ ಆಲೂರು ತಾಲೂಕು ಸುಳುಗೋಡು ಗ್ರಾಮಕ್ಕೆ ಕೊಂಡೊಯ್ದಿರುವ ನಂದಿನಿ ಸಂಬಂಧಿಕರು, ಕೊಲೆಗಡುಗರ ಬಂಧನವಾಗಬೇಕು. ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಇಬ್ಬರು ಮಕ್ಕಳಿಗೆ ಜೀವನಾಂಶ ಕೊಡಬೇಕು ಎಂದು ಆಗ್ರಹಿಸಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಇಂದೂ ಸಹ ಪ್ರತಿಭಟನೆ ಮುಂದುವರಿದಿದೆ.
ಏನಿದು ಪ್ರಕರಣ?
2006ರಲ್ಲಿ ನಂದಿನಿ ಮತ್ತು ಮೋಹನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಮೋಹನ್ ಸ್ವಗ್ರಾಮ ಬಿಟ್ಟು ಹಾಸನದಲ್ಲಿ ಇರುತ್ತೇವೆ ಎಂದು ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿ ಸಂಸಾರ ಆರಂಭಿಸಿದ್ದ. ನಂದಿನಿ ತನ್ನ ಗಂಡ ಮೋಹನ್ ಕುಮಾರ್ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮದುವೆಯಾದ ನಂತರ ಹಣಕ್ಕಾಗಿ ಹಾಗೂ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದೀಯ ಎಂದು ಹೇಳಿ ನಂದಿನಿಗೆ ಮೋಹನ್ ತುಂಬಾ ಕಾಟಕೊಡುತ್ತಿದ್ದ. ಅಷ್ಟೇ ಅಲ್ಲದೇ ಹಲವು ಸಂದರ್ಭ ಆತನ ಪೋಷಕರ ಮಾತು ಕೇಳಿ, ಪತ್ನಿಯನ್ನು ಮನೆಯಿಂದ ಹೊರಗಡೆ ಹಾಕಿದ್ದ.
ಈ ನಡುವೆ ಸಂಸಾರ ಸರಿಯಾಗಿ ನಡೆಯಲು ಹಿರಿಯರು ಇಬ್ಬರ ನಡುವೆ ಮಾತಕತೆ ನಡೆಸಿ ರಾಜಿ ಸಂಧಾನ ಮಾಡಿಸಿದ್ದರು. ನಂದಿನಿ ಸಂಸಾರ ಸಾಕಲು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೂ ಕೂಡ ಹಳೇ ಚಾಳಿ ಬಿಡದ ಪಾಪಿ ಪತಿ, ಇಬ್ಬರು ಹೆಣ್ಣು ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟುಬಂದಿದ್ದ. ಮಂಗಳವಾರ ರಾತ್ರಿ ಗಾರ್ಮೆಂಟ್ ಕೆಲಸ ಮುಗಿಸಿ ಬಂದ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಬಳಿಕ ವೇಲ್ನಿಂದ ನೇಣು ಹಾಕಿ, ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂದು ಆರೋಪಿ ಪರಾರಿಯಾಗಿದ್ದಾನೆ.
ಈ ನಡುವೆ ರೊಚ್ಚಿಗೆದ್ದ ನಂದಿನಿ ಕಡೆಯವರು, ಮೋಹನ್ ಮನೆಯ ಕೆಲವು ವಸ್ತುಗಳನ್ನು ಜಖಂಗೊಳಿಸಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews