– ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ?
ಉಡುಪಿ: ಗೋಮಾಂಸ ತಿನ್ನುವವ ರಾಕ್ಷಸ ಸಮಾನ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣಮಠದ ರಥಬೀದಿಯಲ್ಲಿ ನಡೆದ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವು ಭಕ್ಷಣೆ ಮಾಡುವವ ಮನುಷ್ಯನೇ ಅಲ್ಲ. ಗೋವು ಹಾಲು ಕೊಡುವ ಎಲ್ಲರ ತಾಯಿ. ಗೋವಿನ ಹಾಲು ಕುಡಿದವನಿಗೆ ಅದನ್ನು ಕೊಲ್ಲುವಾಗ ಏನೂ ಅನ್ನಿಸೋದಿಲ್ಲವೇ? ಗೋವನ್ನು ಕೊಲ್ಲುವವ ಮಾನವನೇ ಅಲ್ಲ. ಅವನು ರಾಕ್ಷಸ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯವಾದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರ್ಮಿಕ ದೃಷ್ಟಿಗಿಂತ ಆಗದಿದ್ದರೆ, ಮಾನವೀಯ ದೃಷ್ಟಿಯಿಂದಾದರೂ ಗೋ ರಕ್ಷಣೆ ಮಾಡಿ. ಗೋ ರಕ್ಷಣೆಗೆ ಸರ್ಕಾರ ವಿಶೇಷ ಗಮನ ಕೊಡಬೇಕು ಎಂದು ಒತ್ತಾಯಿಸಿದರು. ಕೇಂದ್ರದಲ್ಲಿ ಮೋದಿ ಸರಕಾರ ಬಲವಾಗಿ ಬಂದಿದೆ. ಬಿಜೆಪಿಗೆ ಬಹುಮತ ಇದೆ. ಯಾವ ಪಕ್ಷದ ಬೆಂಬಲ ಇಲ್ಲದಿದ್ದರೂ ಮೊದಲ ವರ್ಷದಲ್ಲೇ ಗೋ ರಕ್ಷಣೆಗೆ ದೃಢ ಕಾನೂನು ತರಬೇಕು ಎಂದು ಮನವಿ ಮಾಡಿಕೊಂಡರು.
ದೇಶದಲ್ಲಿ ಹುಲಿ, ಸಿಂಹ ಸಂತಾನ ಉಳಿಸಲು ಸರ್ಕಾರ ಬಹಳಷ್ಟು ಕ್ರಮ ಕೈಗೊಳ್ಳುತ್ತದೆ. ಆದರೆ ಗೋವಿನ ತಳಿ ಉಳಿಸಲು ಸರ್ಕಾರ ಈವರೆಗೆ ನಿಗದಿತ ಕ್ರಮ ಕೈಗೊಳ್ಳುವುದಿಲ್ಲ. ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಸಿಂಹ- ಹುಲಿಗಿಂತ ಗೋವು ಕೀಳಾಗಿಬಿಟ್ಟಿದೆಯೇ? ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ? ಎಂದು ಪ್ರಶ್ನಿಸಿದರು. ಬಳಿಕ ಗೋ ಸಾಗಾಟ, ಗೋವು ಕೊಲ್ಲುವ ವಿಧಾನ ಅತ್ಯಂತ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋವಿನ ಜೊತೆ ಗೂಳಿಯ ರಕ್ಷಣೆಯೂ ಆಗಬೇಕು. ಹಾಲು ಕೊಡುವ ಹಸುವಿರಬೇಕಾದರೆ ಎತ್ತು, ಕೋಣ ಇರಲೇಬೇಕು. ನಮ್ಮ ಭಾರತದ ದೇಸಿ ತಳಿ ಗೋವುಗಳ ರಕ್ಷಣೆ ಆಗಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ರಥಬೀದಿಯಲ್ಲಿ ಇಡೀ ದೇಶದ ದೇಸಿ ಹಸುಗಳ ಪ್ರದರ್ಶನ ನಡೆಯುತ್ತಿದ್ದು, ಬರುವ ಜನರಿಗೆ ಗೋವುಗಳ ಬಗ್ಗೆ ಮಾಹಿತಿಯನ್ನು ಕೊಡಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
https://www.youtube.com/watch?v=-atjvRa7zrk