ಬೆಂಗಳೂರು: ಹೆಚ್ಡಿಕೆಗೆ (HD Kumaraswamy) ಹೆಣ್ಣುಮಕ್ಕಳ ಬಗ್ಗೆ ಮಾತನಾಡೋಕೆ ಹೇಳಿದೋರು ಯಾರು? ಜನರಿಗೆ ಆಗಿರುವ ಮಾನಸಿಕ ನೋವು ತೆಗೆದುಹಾಕಲು ಆಗಲ್ಲ. ಒಂದು ಸಲ ಮಾತನಾಡಿದ ಮೇಲೆ ಹೋಯ್ತು. ಇದು ರಾಜ್ಯದ ವಿಚಾರ, ಹೆಣ್ಣುಮಕ್ಕಳ ಸ್ವಾಭಿಮಾನದ ವಿಚಾರ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ದಿನೇ ದಿನೇ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಿಜೆಪಿಯವರು ಎಲ್ಲದಕ್ಕೂ ಮಾತನಾಡುತ್ತಾರೆ ಅಲ್ವಾ? ಒಬ್ಬರಾದರೂ ಇದರ ಬಗ್ಗೆ ಮಾತನಾಡಿದ್ದಾರಾ? ಯಾಕೆ ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಯಾರೂ ಮಾತನಾಡುತ್ತಿಲ್ಲ? ದೇಶಕ್ಕೆ ಮೊದಲು ಉತ್ತರ ನೀಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾರು ಗೋ ಬ್ಯಾಕ್, ಯಾರು ಕಮ್ ಬ್ಯಾಕ್ ಅನ್ನೋದು ಚುನಾವಣೆ ಬಳಿಕ ಗೊತ್ತಾಗುತ್ತೆ: ಸಿಎಂಗೆ ಬಿಎಸ್ವೈ ತಿರುಗೇಟು
ಹೆಚ್ಡಿಕೆ ಬಗ್ಗೆ ನನಗೆ ವೈಯಕ್ತಿಕವಾಗಿ ಬಹಳ ಗೌರವ ಇದೆ. ಈಗಲೂ ಗೌರವ ಇದೆ, ಮುಂದೆಯೂ ಇರುತ್ತದೆ. ಆದರೆ ಬಂಡೆ, ಕಲ್ಲು, ಚೂರಿ ವಿಷ ಕೊಟ್ಟರು ಅನ್ನೋದು ಇವೆಲ್ಲಾ ಯಾಕೆ? ನಾವು ಹಿರಿಯರಿಗೆ ಕೊಡುವ ಗೌರವ ಸ್ವೀಕಾರ ಮಾಡಬೇಕು. ನಮ್ಮಂತವರನ್ನು ಕಳೆದುಕೊಳ್ಳೋದು ನನ್ನನ್ನು ಕಳೆದುಕೊಂಡಂತೆ ಅಲ್ಲ. ಇಡೀ ಸಮುದಾಯವನ್ನು ಕಳೆದುಕೊಂಡಂತೆ. ನಾನು ಅವರು ಏನೇ ಅಂದರೂ ಸಮುದಾಯಕ್ಕಾಗಿ ಗೌರವ ಕೊಟ್ಟಿದ್ದೆ. ಅವರು ಏನು ಅಂದರೂ ತಡೆದುಕೊಂಡಿದ್ದೆ. ಆದರೆ ವೈಯಕ್ತಿಕ ದಾಳಿ ಮಾಡಿದರು. ಹೌದು ನನ್ನ ಬಂಡೆ, ನನ್ನ ಆಸ್ತಿ, ನನ್ನ ಜಮೀನು. ಯಾವುದೋ ಹೆಣ್ಣುಮಕ್ಕಳ ಜಮೀನು ಬರೆಸಿಕೊಂಡೆ ಅಂದರು. ಯಾವ ಹೆಣ್ಣುಮಕ್ಕಳು, ಯಾವ ಜಮೀನು? ನನ್ನ ಜಮೀನಿನಲ್ಲಿ ಇರುವ ಬಂಡೆ ಒಡೆದು ನಾನು ಬದುಕಿಕೊಂಡಿದ್ದೇನೆ. ಕುಮಾರಸ್ಚಾಮಿ ನನ್ನ ಸವಾಲು ಸ್ವೀಕಾರ ಮಾಡೋಕೆ ಆಗಲ್ಲ ಅಂದ್ರೆ ಬಿಟ್ಟುಬಿಡೋಣ. ಚುನಾವಣೆ ಆದಮೇಲೆ ಮುಂದೆ ಅಸೆಂಬ್ಲಿಯಲ್ಲಿ ನೋಡೋಣ ಎಂದರು. ಇದನ್ನೂ ಓದಿ: ರಾಜಾ ಅಮರೇಶ್ವರ ನಾಯಕ ಜಾತಿ ಪ್ರಮಾಣ ಪತ್ರ ಗೊಂದಲ- ಏ.19ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಸಹೋದರನಿಗೆ ಮತ ಹಾಕುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಧಮ್ಕಿ ಹಾಕಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಬೆಂಗಳೂರು ನಗರದ ಎಲ್ಲಾ ಜನರಿಗೂ ಈ ಕಷ್ಟ ಕಾಲದಲ್ಲಿ ನೀರು ಕೊಡುತ್ತಿದ್ದೇವೆ ಎಂದು ಹೇಳಿದರು. ಡಿಕೆಶಿ ಯಾವಾಗ ಒಕ್ಕಲಿಗ ನಾಯಕನಾದ್ರು ಎಂಬ ಆರ್.ಅಶೋಕ್ ಹೇಳಿಕೆ ಕುರಿತು ಮಾತನಾಡಿದ ಅವರು, ನಾನು ನಾಯಕ ಅಂತ ಹೇಳಿದೋರು ಯಾರು? ನಾನು ನಾಯಕನೇ ಅಲ್ಲ. ಅವರೇ ನಾಯಕರು. ಅವರು ವಿಪಕ್ಷ ನಾಯಕರು, ದೊಡ್ಡ ನಾಯಕರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: UPSC ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ್ಗೆ ಮೊದಲ ರ್ಯಾಂಕ್
ಬುಧವಾರ ರಾಹುಲ್ ಗಾಂಧಿ (Rahul Gandhi) ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ ಮಂಡ್ಯಕ್ಕೆ ಬರುತ್ತಾರೆ. ಆಮೇಲೆ ಕೋಲಾರಕ್ಕೆ ಹೋಗುತ್ತಾರೆ. ಬೆಂಗಳೂರಲ್ಲಿ ಪ್ರಚಾರ ಇರಲ್ಲ. ಬೆಂಗಳೂರಿಗೆ ಬಂದು ಡೆಲ್ಲಿಗೆ ಹೋಗುತ್ತಾರೆ. ಪ್ರಿಯಾಂಕ ಗಾಂಧಿಗೂ ಬರಬೇಕೆಂದು ಹೇಳಿದ್ದೇವೆ. ತುಂಬಾ ಬೇಡಿಕೆ ಇದೆ. ಬೇರೆ ರಾಜ್ಯದಲ್ಲೂ ಒತ್ತಡ ಇದೆ. ಹೀಗಾಗಿ ನಮ್ಮ ರಾಜ್ಯಕ್ಕೂ ಒಂದು ದಿನ ಬರಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಅಜ್ಜಿ, ತಾತಾ, ಅಮ್ಮ ಬಂದ್ರೂ ಕೋಲಾರ ಗೆಲುವು ನಮ್ಮದೇ: ಮುನಿಸ್ವಾಮಿ