ನವದೆಹಲಿ: ಮೆಟಾ (Meta) ಮಾಲೀಕತ್ವದ ಮೆಸೆಜಿಂಗ್ ಆಪ್ ವಾಟ್ಸಪ್ (Whatsapp) ಇಂದು ಮಧ್ಯಾಹ್ನದ ವೇಳೆಗೆ ಸುಮಾರು 2 ಗಂಟೆಗಳ ಕಾಲ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಈ ವೇಳೆ ಬಳಕೆದಾರರು ಇತರರಿಗೆ ಯಾವುದೇ ಸಂದೇಶಗಳನ್ನು ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಲವರು ಸೂರ್ಯ ಗ್ರಹಣದೊಂದಿಗೆ ವಾಟ್ಸಪ್ಗೂ ಗ್ರಹಣ ಹಿಡಿಯಿತೇನೋ ಎಂಬಂತಹ ಹಲವು ಮೀಮ್ಸ್ಗಳನ್ನು ಮಾಡಿದ್ದಾರೆ.
ವಾಟ್ಸಪ್ ಜಾಗತಿಕವಾಗಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿದ್ದರೂ ಆಮ್ ಆದ್ಮಿ ಪಕ್ಷ (AAP) ಮಾತ್ರ ಇದಕ್ಕೆ ಬಿಜೆಪಿಯೇ (BJP) ಕಾರಣ ಎಂದು ಆರೋಪಿಸಿದೆ. ಆಪ್ ಶಾಸಕ ನರೇಶ್ ಬಲ್ಯಾನ್ (Naresh Balyan) ಟ್ವೀಟ್ ಮಾಡಿ, ಬಿಜೆಪಿ ಗುಜರಾತ್ (Gujarat) ಅನ್ನು ಕಳೆದುಕೊಳ್ಳುತ್ತಿದೆ. ಇದಕ್ಕಾಗಿಯೇ ವಾಟ್ಸಪ್ ಸ್ಥಗಿತಗೊಂಡಿರುವುದು ಎಂದಿದ್ದಾರೆ. ಇದನ್ನೂ ಓದಿ: ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್
Whatsapp is down, Because BJP is loosing Gujrat.#WhatsAppDown
— Naresh Balyan (@AAPNareshBalyan) October 25, 2022
ವಾಟ್ಸಪ್ ಜಾಗತಿಕ ಸ್ಥಗಿತಕ್ಕೆ ಬಿಜೆಪಿಯೇ ಕಾರಣ ಎನ್ನುವ ಮೂಲಕ ಬಲ್ಯಾನ್ ಅವರು ವಾಟ್ಸಪ್ನ ತಾಂತ್ರಿಕ ದೋಷವನ್ನು ಗುಜರಾತ್ನ ವಿಧಾನಸಭೆ ಚುನಾವಣೆಗೆ ಹೋಲಿಸಿ, ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಇಂದು ಭಾರತ ಮಾತ್ರವಲ್ಲದೇ ಅಮೆರಿಕ, ಜರ್ಮನಿ, ದಕ್ಷಿಣ ಆಫ್ರಿಕಾ, ಬಹ್ರೇನ್, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ವಾಟ್ಸಪ್ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಈ ವೇಳೆ ವಾಟ್ಸಪ್ ಬಳಕೆದಾರರು ವಾಟ್ಸಪ್ ಕರೆ ಮಾಡಲು ಹಾಗೂ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ 2 ಗಂಟೆಗಳ ಒಳಗಾಗಿ ವಾಟ್ಸಪ್ ಸೇವೆ ಪುನರಾರಂಭಗೊಂಡಿತು. ಇದನ್ನೂ ಓದಿ: ಭಾರತ ರಾಜಕಾರಣದಲ್ಲಿ ಸುನಾಕ್ ಸುಂಟರಗಾಳಿ – ಅಲ್ಪಸಂಖ್ಯಾತರಿಗಿಲ್ಲಿ ಅಧಿಕಾರ ಸಿಗುತ್ತಾ ಎಂದು ತರೂರ್ ಪ್ರಶ್ನೆ