ಬೆಂಗಳೂರು: ಯಡಿಯೂರಪ್ಪ(Yediyurappa) ಮೇಲಿನ ಭ್ರಷ್ಟಾಚಾರ(Corruption) ಆರೋಪದಲ್ಲಿ 0.1% ಸತ್ಯವೂ ಇಲ್ಲ. ನಾವು ಹೆದರಿ ಓಡಿ ಹೋಗುವುದಿಲ್ಲ. 30 ಕೇಸ್ ಈಗಾಗಲೇ ಎದುರಿಸಿದ್ದು, ಇದು 31 ನೇ ಕೇಸ್. ಯಾವನಿಗೂ ಹೆದರಿ ಓಡಿ ಹೋಗುವ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ(Vijayendra yediyurappa) ಹೇಳಿದ್ದಾರೆ.
ಬಿಜೆಪಿ(BJP) ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಯಡಿಯೂರಪ್ಪ ಮತ್ತು ನನ್ನನ್ನು ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು, ಯಾರಿಗೆ ಕೊಡಬೇಕು ಎನ್ನುವುದು ಗೊತ್ತಿದೆ ತಿರುಗೇಟು ನೀಡಿದರು.
ನಮ್ಮ ವಿರುದ್ಧ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ಆ ರಾಜಕೀಯ ವಿರೋಧಿಗಳು ಪಕ್ಷದವರಾ? ಹೊರಗಿನವರಾ ಎಂಬುದನ್ನು ನಾನು ಹೇಳಲ್ಲ. ಅವರು ರಾಜಕೀಯ ವಿರೋಧಿಗಳು ಅಂತ ಮಾತ್ರ ಹೇಳುತ್ತೇನೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ರಾಜಕೀಯ ವಿರೋಧಿಗಳ ಷಡ್ಯಂತ್ರ ಮೆಟ್ಟಿ ನಿಲ್ಲುವ ಧೈರ್ಯ ತಾಕತ್ತು ಶಕ್ತಿಯನ್ನು ಆ ದೇವರು ನನಗೆ ಕೊಟ್ಟಿದಾನೆ. ಆ ಬುದ್ಧಿಶಕ್ತಿಯೂ ನಮಗೆ ಇದೆ. ಇಂಥ ಇನ್ನೂ ನೂರು ಆರೋಪ ಬಂದರೂ ಎದುರಿಸ್ತೇನೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜಕೀಯ ವಿರೋಧಿಗಳೆಲ್ಲರ ಕೈವಾಡ ಇದರಲ್ಲಿದ್ದು ಬಿಜೆಪಿಯವರ ಕೈವಾಡ ಇದೆ ಅಂತ ನಾನು ಹೇಳುತ್ತಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ 10% ಕಮಿಷನ್ ತಗೊಳ್ಳಿ – ಬಿಜೆಪಿಯವರ ತರ 40% ಬೇಡ: ನಿಡುಮಾಮಿಡಿ ಶ್ರೀ
ನನಗೂ ಕೂಡಾ ರಾಜಕೀಯವಾಗಿ ಬೆಳೆಯುತ್ತಿರುವ ಸಂದರ್ಭ ಇದಾಗಿದ್ದು ಈ ರೀತಿಯ ಸವಾಲುಗಳು ಬಂದಾಗ ನಮಗೂ ಬೆಳೆಯಲು ಸುಲಭವಾಗುತ್ತದೆ. ಈ ಸವಾಲುಗಳನ್ನು ಬಹಳ ಸಂತೋಷದಿಂದ ನಾನು ಎದುರಿಸುತ್ತೇನೆ. ಎಷ್ಟೇ ಕೇಸ್ ಹಾಕಿದರೂ ಎದುರಿಸುತ್ತೇವೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಆದರೆ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗಲಿಲ್ಲ. ರಾಜಕೀಯ ವಿರೋಧಿಗಳು ಏನೇ ಷಡ್ಯಂತ್ರ ಮಾಡಿದರೂ ಯಶಸ್ವಿಯಾಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ನ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಎದುರಿಸುತ್ತೇವೆ. ಅವರ ಅಭಿಯಾನದಿಂದ ಬಿಜೆಪಿ ಹೆದರಿಕೊಂಡಿಲ್ಲ. ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕ ಹಕ್ಕು ಕಾಂಗ್ರೆಸ್ನವರಿಗೆ ಇಲ್ಲ. ಯಾರೋ ಒಬ್ಬ ಗುತ್ತಿಗೆದಾರ ಆರೋಪ ಮಾಡಿದಕ್ಕೆ ಕಾಂಗ್ರೆಸ್ನವರು ದಾಖಲೆ ಇಲ್ಲದೇ ರಾಜ್ಯಾದ್ಯಂತ ಅಭಿಯಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.