ಬಳ್ಳಾರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಅಪರಾಧ ಎಸಗಿಲ್ಲ. ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ಕಾನೂನು ಹೋರಾಟದಲ್ಲಿ ಪಕ್ಷ ಡಿಕೆಶಿ ಜೊತೆಗಿದೆ. ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಎಐಸಿಸಿ ಕೂಡ ಡಿಕೆಶಿ ಬೆಂಬಲಕ್ಕಿರೋದಾಗಿ ಘೋಷಿಸಿದೆ ಎಂದು ಈ ವೇಳೆ ತಿಳಿಸಿದರು.
ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಂಡಿಲ್ಲ. ತಲೆಕೆಟ್ಟ ಬಿಜೆಪಿಯವರು ಈ ಮಾತನ್ನು ಹೇಳುತ್ತಾರೆ. ಸಿಬಿಐಗೆ ಅನೇಕ ದೂರುಗಳನ್ನು ನೀಡಿದ್ದೇವೆ. ಆದರೆ, ಅವುಗಳ ಕುರಿತು ಸೂಕ್ತ ತನಿಖೆ ನಡೆಸಿ ಈ ವೆರೆಗ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಿಬಿಐ ದುರ್ಬಳಕೆ ಮಾಡಿಕೊಂಡು ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅಮಿತ್ ಶಾ ಪ್ರಕರಣ ಮುಚ್ಚಿ ಹೋಗುತ್ತಿದೆ. ಆದರೆ ರಾಬಟ್ ವಾದ್ರಾ, ಚಿದಂಬರಂ, ಡಿ.ಕೆ.ಶಿವಕುಮಾರ್ ಅವರನ್ನು ಸಿಕ್ಕಿ ಹಾಕಿಸುತ್ತಿದ್ದಾರೆ. 2007ರ ಪ್ರಕರಣಕ್ಕೆ ಈಗ ಚಾರ್ಚ್ ಶೀಟ್ ಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿಯವರ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸಿಲುಕಿಸುತ್ತಿದ್ದಾರೆ. ಆಪರೇಷನ್ ಕಮಲ ಮಾಡುವುದಕ್ಕೆ ಐದು ಕೋಟಿ ರೂ. ಹಣ ಕೊಡೋಕೆ ಬಂದಿದ್ದರು ಎಂದು ಸದನದಲ್ಲಿ ಶಾಸಕ ಶ್ರೀನಿವಾಸ ಆರೋಪಿಸಿದ್ದರು. ಅಲ್ಲದೆ, ಈ ಕುರಿತು ಬಿ.ಎಸ್.ಯಡಿಯೂರಪ್ಪನವರ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣ ಏನಾಗಿದೆ? ಸಿಬಿಐ ಏನು ಮಾಡುತ್ತಿದೆ. ಈ ಪ್ರಕರಣಗಳನ್ನೆಲ್ಲ ಬಿಟ್ಟು ಯಾವುದೇ ಅಪರಾಧ ಎಸಗಿಲ್ಲದ ಡಿಕೆಶಿ ಮೇಲೆ ವಿಚಾರಣೆ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಕೃತ್ಯವಾಗಿದೆ ಎಂದು ಕಿಡಿಕಾರಿದರು.