ಹಾವೇರಿ: ಮತದಾರರೇ ನನ್ನ ಹೈಕಮಾಂಡ್. ಅವರು ಯಾವ ರೀತಿ ಸೂಚಿಸುತ್ತಾರೆ ಆ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಮಂಡಿಯೂರಿ ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ. ಸಚಿವ ಸ್ಥಾನ ಕೇಳುವ ಹಕ್ಕು ನನಗಿದೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಬೇರೆ ಯಾವುದೇ ಪಕ್ಷ ಸೇರುವ ಯೋಚನೆಯೇ ಇಲ್ಲ, ಯಾವುದೇ ಪಕ್ಷಗಳು ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನ ಈ ನಿರ್ಧಾರದಿಂದ ಕರೆ ಮಾಡಲು ಭಯ ಪಡುತ್ತಿದ್ದಾರೆ. ಮುಖಂಡರು ಭರವಸೆ ನೀಡಿದ್ದು, ಕಾದು ನೋಡೋಣ ಮುಂದಿನ ದಿನಗಳಲ್ಲಿ ಒಳ್ಳೆಯ ಟೈಂ ಬರುತ್ತದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ರವರು ಸಂಪರ್ಕ ಮಾಡಿ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ನಾವು ಎಲ್ಲಾ ಜನಾಂಗ, ಪ್ರಾಂತ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡಿದ್ದರಿಂದ ಸಚಿವ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾನು ಪಕ್ಷದ ವಿರೋಧಿಯಲ್ಲ ಹಾಗೂ ಶಾಸಕ ಎಂ ಬಿ ಪಾಟೀಲ್ರ ತಂಡದಲ್ಲಿ ಗುರುತಿಸಿಕೊಂಡಿಲ್ಲ. ಪಕ್ಷದ ವಿರುದ್ಧ ಯಾವುದೇ ಗುಂಪುಗಾರಿಕೆ ನಡೆಸಿಲ್ಲ. ಸಚಿನ ಸ್ಥಾನದ ಆಕಾಂಕ್ಷಿಯಾದ ನನಗೆ ಕಾಂಗ್ರೆಸ್ನ ಶಾಸಕರು ಬೆಂಬಲ ನೀಡಿದ್ದರು. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಸಚಿನ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಸಚಿವ ಸಂಪುಟ ಪಟ್ಟಿಯಿಂದ ಕೈ ಬಿಟ್ಟಿದ್ದು ಬೇಸರವುಂಟಾಗಿದೆ ಎಂದು ನೋವು ತೋಡಿಕೊಂಡರು.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿನ ಯಾವೊಬ್ಬ ಶಾಸಕರಿಗೂ ಮಂತ್ರಿಸ್ಥಾನ ನೀಡಿಲ್ಲ. ಮುಂದಿನ ದಿನಗಳಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಪರಿಗಣಿಸಿ ಒಂದು ಸಚಿವ ಸ್ಥಾನವನ್ನಾದರೂ ನೀಡಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರು ಕ್ಷೇತ್ರಕ್ಕೆ ವಾಪಾಸ್ಸಾಗಿದ್ದರು. ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.