ಬೆಂಗಳೂರು: ಸೋಮವಾರ ಅಧಿವೇಶನದಂದು ಆಡಳಿತ ಪಕ್ಷದ ಮೊಗಸಾಲೆಯತ್ತ ಹೆಜ್ಜೆ ಹಾಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕೂಡ ಗೊಂದಲ ಮಾಡಿಕೊಂಡ ಘಟನೆ ನಡೆದಿದೆ.
ವಿಪಕ್ಷದ ಕಚೇರಿಗೆ ತೆರಳಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದಾರಿತಪ್ಪಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಕೊಠಡಿಗೆ ಹೋಗಿ ಕುಳಿತಿದ್ದರು. ಕೆಲಹೊತ್ತು ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸಿದ್ದರಾಮಯ್ಯ ಆಸೀನರಾಗಿದ್ದರು. ಆದರೆ ಇಲ್ಲಿ ಕಾಂಗ್ರೆಸ್ನವರು ಯಾರು ಇಲ್ವಲ್ಲಾ ಎಂದು ಹೊರಬಂದು ಬೋರ್ಡ್ ನೋಡಿದರೆ ಅದು ಬಿ.ಎಸ್.ಯಡಿಯೂರಪ್ಪನವರದ್ದು. ಅಯ್ಯೋ ಅಂದ್ಕೊಂಡು ಸಿದ್ದರಾಮಯ್ಯ ಅವರು ಮುಂದೆ ಸಾಗಿದರು.
ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಕ್ಕೆ ಅಧಿವೇಶನಲ್ಲಿ ಕಿಡಿಕಾರಿದರು. ಟಿಪ್ಪು ಜಯಂತಿ ರದ್ದತಿ ಬಗ್ಗೆ ಪ್ರಸ್ತಾಪಿಸಲು ಸಿದ್ದರಾಮಯ್ಯ ಪ್ರಸ್ತಾಪಿಸಲು ಯತ್ನಿಸಿದರು. ಆದರೆ ಉದ್ಯಮಿ ಸಿದ್ಧಾರ್ಥ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಚಿಕ್ಕಮಗಳೂರಿಗೆ ಹೊರಡಬೇಕಿದ್ದ ಕಾರಣ ಸದನದಿಂದ ತುರ್ತಾಗಿ ಹೊರಟರು. ಸಿಎಂ ಯಡಿಯೂರಪ್ಪ ಅವರನ್ನು ಎದ್ದು ಹೋಗಲು ಬಿಡದೇ ಐದು ನಿಮಿಷ ನನ್ನ ಮಾತು ಆಲಿಸಿ ಹೋಗಿ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ಅವರು ಮಾತು ಪ್ರಾರಂಭಿಸುತ್ತಿದ್ದಂತೆ ಯಡಿಯೂರಪ್ಪನವರು ಎದ್ದು ಹೊರ ನಡೆದರು.
ಸಿಎಂ ಹೊರ ನಡೆಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಟಿಪ್ಪು ಜಯಂತಿ ರದ್ದು ಮಾಡಿದ್ದನ್ನು ವಿರೋಧಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸ್ಪೀಕರ್, ಟಿಪ್ಪು ಜಯಂತಿ ರದ್ದು ಕುರಿತ ಚರ್ಚೆಗೆ ನೋಟಿಸ್ ಕೊಟ್ಟಿಲ್ಲ ಎಂದರು. ಇದು ತುರ್ತು ವಿಚಾರ, ಹೀಗಾಗಿ ನೋಟಿಸ್ ಕೊಡುವುದಕ್ಕೆ ಆಗಲಿಲ್ಲ. ಗುರುವಾರ ಸದನ ಇರಲ್ಲ, ಇವತ್ತೇ ಚರ್ಚೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅನಿರ್ಧಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನೊ ಬಿಜೆಪಿ ಮಾಡುತ್ತಿರುವುದೇನು? ಸದನದಲ್ಲಿ ಯಾರೂ ಮಂತ್ರಿಗಳಿಲ್ಲ, ಬಿಎಸ್ವೈ ಬಿಟ್ಟು ಬೇರೆ ಯಾರಿಗೆ ಹೇಳಬೇಕು ಹೇಳಿ. ಸದನದಲ್ಲಿ ಮಾತನಾಡುವುದು ಅರಣ್ಯರೋಧನವಾಗಿತ್ತು ಎಂದು ಅಸಮಾಧಾನ ಹೊರಹಾಕಿದರು.