ಕಾರವಾರ: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಗಳ ಆರತಕ್ಷತೆ ಸಮಾರಂಭ ಶಿರಸಿ ತಾಲೂಕಿನಲ್ಲಿ ಇಂದು ಅದ್ಧೂರಿಯಾಗಿ ನಡೆಯಿತು. ಮಗಳು ಜಯಲಕ್ಷ್ಮಿ ಹಾಗೂ ಅಳಿಯ ಆದಿತ್ಯ ಅವರ ಮದುವೆ ಆರತಕ್ಷತೆಯಲ್ಲಿ ರಾಜ್ಯದ ಪ್ರಮುಖ ನಾಯಕರು, ಮಂತ್ರಿಗಳು, ಅಧಿಕಾರಿಗಳು ಆಗಮಿಸಿ, ಆಶೀರ್ವದಿಸಿದ್ದಾರೆ.
ತಾಲೂಕಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಗೋಳಿಯಲ್ಲಿ ನಡೆದ ಆರತಕ್ಷತೆ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಸಚಿವರಾದ ಕೆ.ಎಸ್.ಈಶ್ವರಪ್ಪ, ಪ್ರಭು ಚೌಹಾಣ್, ಸುರೇಶ ಕುಮಾರ್, ಮಾಜಿ ಸ್ಪೀಕರ್ ಗಳಾದ ಕಾಗೋಡು ತಿಮ್ಮಪ್ಪ, ಡಿ.ಹೆಚ್.ಶಂಕರ್ ಮೂರ್ತಿ ಆಗಮಿಸಿದ್ದರು. ಬಿಜೆಪಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಎಂ.ಉದಾಸಿ ಸೇರಿದಂತೆ ವಿಧಾನಸಭಾ ಕಾರ್ಯಾಲಯದ ಅಧಿಕಾರಿಗಳೂ ಸಹ ಆಗಮಿಸಿ ವಧು-ವರರನ್ನು ಹಾರೈಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೂವರು ಮಕ್ಕಳಲ್ಲಿ ಜಯಲಕ್ಷ್ಮಿ ಹಿರಿಯ ಮಗಳಾಗಿದ್ದಾರೆ. ಸಮಾರಂಭದಲ್ಲಿ 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಹವ್ಯಕ ಬ್ರಾಹ್ಮಣ ಸಂಪ್ರದಾಯದಂತೆ ಶನಿವಾರ ವಿವಾಹ ನಡೆದಿದ್ದು, ಇಂದು ಕುಮಟಾ ರಸ್ತೆಯ ಗೋಳಿ ಗ್ರಾಮದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆರತಾಕ್ಷತೆ ನೆಡೆಯಿತು.