ಮಂಗಳೂರು: ತಮಿಳುನಾಡು ವಿಧಾನಸಭೆಯಂತಹ ಪವಿತ್ರ ಸದನದಲ್ಲಿ ಉದಯನಿಧಿ ಸ್ಟಾಲಿನ್ (Udayanidhi Stalin) ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಅತ್ಯಂತ ಕೀಳುಮಟ್ಟದ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ವಿಶ್ವ ಹಿಂದೂ ಪರಿಷತ್ (VHP) ತೀವ್ರವಾಗಿ ಖಂಡಿಸಿದೆ.
ರಾಜಕೀಯ ಲಾಭಕ್ಕಾಗಿ ಕೋಟ್ಯಂತರ ಜನರ ನಂಬಿಕೆಯಾಗಿರುವ ಸನಾತನ ಧರ್ಮದ (Sanatana Dharma) ನಿರ್ಮೂಲನೆಯ ಬಗ್ಗೆ ಮಾತನಾಡುವುದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ. ಸದನದ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಸನಾತನ ಧರ್ಮದ ವಿರುದ್ಧದ ಈ ವಿಷಪೂರಿತ ಮಾತುಗಳನ್ನು ವಿಧಾನಸಭೆಯ ಅಧಿಕೃತ ನಡಾವಳಿಗಳಿಂದ ಕೂಡಲೇ ತೆಗೆದುಹಾಕಲು ತಮಿಳುನಾಡು ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಇತಿಹಾಸದುದ್ದಕ್ಕೂ ಸನಾತನ ಧರ್ಮವನ್ನು ಅಳಿಸಲು ಹೊರಟ ಎಷ್ಟೋ ಶಕ್ತಿಗಳು ತಾವೇ ಅಳಿದು ಹೋಗಿವೆ. ಸನಾತನ ಧರ್ಮವು ಸೂರ್ಯನಂತೆ ಶಾಶ್ವತ ಮತ್ತು ಪ್ರಬಲವಾಗಿದ್ದು, ಇಂತಹ ಹೇಳಿಕೆಗಳಿಂದ ಅದನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸನಾತನ ಧರ್ಮವು ಕೇವಲ ಒಂದು ಆಚರಣೆಯಲ್ಲ, ಅದು ಈ ದೇಶದ ಜೀವಾಳ ಮತ್ತು ಸಂಸ್ಕೃತಿಯ ಪ್ರತಿಬಿಂಬ. ತುಷ್ಟೀಕರಣ ರಾಜಕಾರಣದಿಂದ ಕೇವಲ ಒಂದು ವರ್ಗದ ಮತಗಳ ಓಲೈಕೆಗಾಗಿ ಸನಾತನ ಧರ್ಮದ ವಿರುದ್ಧ ವಿಷ ಕಾರುವುದು ಹೇಡಿತನದ ಲಕ್ಷಣ. ಉದಯನಿಧಿ ಅವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಲ್ಲ. ಅದು ಹಿಂದೂ ವಿರೋಧಿ ಮನಸ್ಥಿತಿಯ ದ್ಯೋತಕ. ಜಗತ್ತಿನ ಪ್ರಾಚೀನ ಧರ್ಮವನ್ನು ಅಳಿಸಲು ಈ ಹಿಂದೆಯೂ ಅನೇಕ ಆಕ್ರಮಣಕಾರರು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸನಾತನ ಧರ್ಮದ ವಿರುದ್ಧ ಈ ರೀತಿ ಮಾತನಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

