ಗದಗ: ಆರ್ಮಿ ಕ್ಯಾಂಟಿನ್ನಿಂದ ಮದ್ಯ (Liquor) ಸಾಗಿಸುತ್ತಿದ್ದ ವೇಳೆ ಬಸ್ನಿಂದ (Bus) ಇಳಿಸಿದ್ದಕ್ಕೆ ಆರ್ಮಿ (Army) ಕುಟುಂಬಸ್ಥರು ಕಿರಿಕ್ ಮಾಡಿದ ಘಟನೆ ಗದಗದಲ್ಲಿ (Gadag) ನಡೆದಿದೆ.
ಜಿಲ್ಲೆಯ ರೋಣ (Rona) ತಾಲೂಕಿನ ಆರ್ಮಿ ಕುಟುಂಬಸ್ಥರು ಹುಬ್ಬಳ್ಳಿ (Hubballi) ಆರ್ಮಿ ಕ್ಯಾಂಟಿನ್ನಿಂದ ಮದ್ಯ ತರುವ ವೇಳೆ ಕಿರಿಕ್ ನಡೆದಿದೆ. 2 ಆರ್ಮಿ ಕುಟುಂಬದಿಂದ ಇಬ್ಬರು ಮಹಿಳೆಯರು, ಓರ್ವ ಮಾಜಿ ಸೈನಿಕ ಸೇರಿದಂತೆ ಒಟ್ಟು 3 ಜನ ಕ್ಯಾಂಟಿನ್ಗೆ ಹೋಗಿದ್ದರು. ತಮಗೆ ಬೇಕಾದ ಗೃಹ ಬಳಕೆಯ ಸಾಮಗ್ರಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ 4 ಮದ್ಯದ ಬಾಟ್ಲಿಗಳನ್ನು ತೆಗೆದುಕೊಂಡಿದ್ದರು. ಹುಬ್ಬಳ್ಳಿಯಿಂದ ಗದಗ ಬಸ್ನಲ್ಲಿ ಬರುವ ವೇಳೆ ಬಸ್ನಲ್ಲಿ ಅವರ ಬ್ಯಾಗ್ ಅನ್ನು ಪರಿಶೀಲಿಸಲಾಗಿದೆ. ಈ ಸಂದರ್ಭ ಅವರ ಬ್ಯಾಗ್ನಲ್ಲಿ ಮದ್ಯ ಪತ್ತೆಯಾಗಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಬಸ್ನಲ್ಲಿ ಮದ್ಯ, ಮಾದಕವಸ್ತು, ಸ್ಫೋಟಕ ವಸ್ತುಗಳನ್ನು ಸಾಗಿಸಲು ಪರವಾನಿಗೆ ಇಲ್ಲ. ಬಸ್ಸಿನಿಂದ ಕೆಳಗಿಳಿಯಿರಿ ಎಂದು ಕಂಡಕ್ಟರ್ ಹೇಳಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹುಬ್ಬಳ್ಳಿಯಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಕುಟುಂಬಸ್ಥರನ್ನು ಕೆಳಗಿಳಿಸಿ ಬಂದಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರು, ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ – ಬೈಕ್ ಡಿಕ್ಕಿಯಿಂದ ಸ್ವಲ್ಪದರಲ್ಲೇ ಪಾರಾದ ನಿತೀಶ್ ಕುಮಾರ್
ಬಸ್ ಹುಬ್ಬಳ್ಳಿಯಿಂದ ಗದಗ ಬರುವಷ್ಟರಲ್ಲಿ ಸಂಘದ ಸದಸ್ಯರು, ಕುಟುಂಬದ ಇತರೆ ಸದಸ್ಯರು ಬಸ್ ಡಿಪೋ ಬಳಿ ಜಮಾವಣೆಗೊಂಡಿದ್ದಾರೆ. ನಂತರ ಬಂದ ಬಸ್ ಕಂಡಕ್ಟರನ್ನು ತರಾಟೆಗೆ ತೆಗೆದುಕೊಂಡು, ದೂರು ದಾಖಲಿಸಲು ಶಹರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದರಿಂದ ಶಹರ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ಇದನ್ನೂ ಓದಿ: ಹೆಡ್ಗೆವಾರ್, ಸೂಲಿಬೆಲೆ, ಸಾವರ್ಕರ್ ಪಾಠಗಳಿಗೆ ಕೊಕ್ – ಪಠ್ಯ ಪರಿಷ್ಕರಣೆಗೆ ಕಾಂಗ್ರೆಸ್ ಸಂಪುಟ ಅಸ್ತು
ನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಸ್ನಲ್ಲೇ ಬಂದಿದ್ದೇವೆ. ಅದರ ಬಿಲ್ ಇರುವುದರಿಂದ ನಮಗೆ ಅವಕಾಶ ಇದೆ ಎಂದು ವಾದಿಸಿದರು. ಇದಕ್ಕೆ ಸಾರಿಗೆ ಸಂಸ್ಥೆಯವರು ಮದ್ಯ, ಸ್ಫೋಟಕ ವಸ್ತುಗಳನ್ನು ಬಸ್ನಲ್ಲಿ ಸಾಗಿಸುವಂತಿಲ್ಲ ಎಂದು ಅದರ ಆದೇಶ ಪ್ರತಿ ತೋರಿಸಿದ್ದಾರೆ. ಹಾಗಾದರೆ ಮದ್ಯ ತರಲು ನಮಗೆ ಸರ್ಕಾರ ಯಾವುದಾದರೂ ದಾರಿ ತೋರಿಸಲಿ. ಕುಡಿದು ಬಸ್ ಹತ್ತಿ ಬರುವವರಿಗೆ ಅವಕಾಶ ಕೊಡುತ್ತೀರಿ. ಆದರೆ ಅಧಿಕೃತ ಬಿಲ್ ಪಡೆದು ಮನೆಗೆ ಮದ್ಯದ ಬಾಟ್ಲಿ ತರಲು ಯಾಕೆ ಅವಕಾಶವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ಸಾರಿಗೆ ಇಲಾಖೆ ಆದೇಶ ಪ್ರತಿ ನೋಡಿದ ನಂತರ ಸರ್ಕಾರಕ್ಕೆ ಮನವಿ ನೀಡುವುದಾಗಿ ಅಲ್ಲಿಂದ ಎಲ್ಲರೂ ಕಾಲ್ಕಿತ್ತರು.ಇದನ್ನೂ ಓದಿ:ಇನ್ಮುಂದೆ ಮಹದೇವಪ್ಪನೂ ಕನ್ವರ್ಟ್, ಕಾಕಪಾಟೀಲನೂ ಕನ್ವರ್ಟ್- ಯತ್ನಾಳ್ ಹೀಗಂದಿದ್ಯಾಕೆ..?