ಚಿಕ್ಕಮಗಳೂರು: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮನೆ ಮನೆಗೆ ಹೋಗಿ ಅಯೋಧ್ಯೆಯ ರಾಮಮಂದಿರದ (Ram Mandir) ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನ ಹಂಚಿದ್ದಾರೆ.
ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಹಂಚಿದರು. ಇಂದು (ಶನಿವಾರ) ವಿವಿಧ ಕಾರ್ಯಕ್ರಮಗಳಿಗಾಗಿ ತಾಲೂಕಿಗೆ ಆಗಮಿಸಿದ್ದ ಅವರು, ಅಯೋಧ್ಯೆಯಿಂದ ಬಂದಿರುವ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನ ಮನೆ ಮನೆಗೆ ಹೋಗಿ ವಿತರಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಯಕ್ಕೆ ರಾಜ್ಯದ ದೇವಾಲಯಗಳಲ್ಲೂ ವಿಶೇಷ ಪೂಜೆ, ಮಹಾಮಂಗಳಾರತಿ
ಇದಕ್ಕೂ ಮುನ್ನ ಮುಗುಳುವಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿದರು.
ಮಂತ್ರಾಕ್ಷತೆ ನೀಡಲು ಮನೆ ಬಾಗಿಲಿಗೆ ಬಂದ ಕೇಂದ್ರ ಸಚಿವರಿಗೆ ಮುತ್ತೈದೆಯರು ಆರತಿ ಎತ್ತಿ ತಮ್ಮ ಮನೆಗೆ ಸ್ವಾಗತಿಸಿಕೊಂಡರು. ಮಂತ್ರಾಕ್ಷತೆ ನೀಡಿದ ಶೋಭಾ ಕರಂದ್ಲಾಜೆ, ಇದೇ 22ಕ್ಕೆ ರಾಮಮಂದಿರ ಉದ್ಘಾಟನೆ ಇದೆ. ನಿಮ್ಮ ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಇರಲಿದೆ. ರಾಮಮಂದಿರ ಉದ್ಘಾಟನೆಯ ನೇರಪ್ರಸಾರದ ಕಾರ್ಯಕ್ರಮ ವೀಕ್ಷಣೆಗೆ ಅಲ್ಲೇ ಟಿವಿ ಕೂಡ ಇರುತ್ತೆ. ಸಂಜೆ ನಿಮ್ಮ ಮನೆ ಮುಂದೆ ಐದು ದೀಪ ಹಚ್ಚಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಎಲ್ಲಾ ಜೈಲುಗಳಲ್ಲೂ ರಾಮಮಂದಿರ ಉದ್ಘಾಟನೆ ನೇರಪ್ರಸಾರ
ಪ್ರತಿ ಮನೆಗೂ ಹೋಗುವ ಮುನ್ನ ರಸ್ತೆಯದ್ದಕ್ಕೂ ಸಂಸದೆ ಶೋಭಾ ಕರಂದ್ಲಾಜೆ ರಾಮಭಜನೆಯನ್ನ ಮಾಡುತ್ತಾ ಮನೆ ಮನೆಗೆ ಹೋಗಿದ್ದಾರೆ. ಪ್ರತಿ ಮನೆಗೂ ಮಂತ್ರಾಕ್ಷತೆ ನೀಡಿ ಈ ಅಕ್ಷತೆಯನ್ನ ರಾಮಮಂದಿರ ಉದ್ಘಾಟನೆ ದಿನದವರೆಗೂ ನಿಮ್ಮ ಮನೆಯಲ್ಲಿ ಇಟ್ಕೊಂಡು ಅಂದು ಊಟದಲ್ಲಿ ಈ ಮಂತ್ರಾಕ್ಷತೆಯನ್ನೂ ಹಾಕಿ ಊಟ ಮಾಡಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಸಂಸದೆ ಶೋಭಾಗೆ ಬಿಜೆಪಿಯ 25ಕ್ಕೂ ಹೆಚ್ಚು ಕಾರ್ಯಕರ್ತರು ಸಾಥ್ ನೀಡಿದ್ದಾರೆ.