ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ ಭಾಷಣದಲ್ಲಿ ಕವಿತೆಗಳನ್ನೂ ಸೇರಿಸಿಕೊಂಡಿದ್ದರು. ಕೆಲವು ಕವನಗಳನ್ನು ಬಳಸಿ ವಿಪಕ್ಷಗಳನ್ನು ಕಾಲೆಳೆದ ಪ್ರಸಂಗವೂ ನಡೆಯಿತು.
ನೋಟ್ ಬ್ಯಾನ್ ಹಾಗೂ ಡಿಜಿಟಲ್ ಪೇಮೆಂಟ್ ಬಗ್ಗೆ ಬಜೆಟ್ನಲ್ಲಿ ಉಲ್ಲೇಖಿಸಿದ ಜೇಟ್ಲಿ, ಹಿಂದಿ ಕವನದ ಸಾಲುಗಳನ್ನು ವಾಚಿಸಿದಾಗ ಲೋಕಸಭಾ ಸದಸ್ಯರು ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು.
ಇಸ್ ಮೋಡ್ ಪರ್ ಗಬರಾಕರ್ ಥಮ್ ಜಾಯಿಯೇ ಆಪ್| ಜೋ ಬಾತ್ ನಯೀ ಹೈ ಉಸೇ ಅಪ್ನಾಯಿಯೇ ಆಪ್| ಡರ್ತೇ ಹೈ ನಯೀ ರಾಹ್ ಪೇ ಕ್ಯೂ ಚಲ್ ನೇ ಸೇ| ಹಮ್ ಆಗೇ ಆಗೇ ಚಲ್ತೇ ಹೈ, ಆಯಿಯೇ ಆಪ್
(ಅರ್ಥ: ನೀವು ಇಂಥಾ ಪರಿಸ್ಥಿತಿ ಬಂದಾಗ ಹೆದರಬೇಡಿ, ಹೊಸತನ್ನು ನೀವು ನಿಮ್ಮದಾಗಿಸಿಕೊಳ್ಳಿ. ಹೊಸ ದಾರಿಯಲ್ಲಿ ನಡೆಯಲು ನಿಮಗೆ ಹೆದರಿಕೆ ಏಕೆ, ನಾವು ಮುಂದೆ ಮುಂದೆ ಸಾಗುತ್ತೇವೆ, ನೀವೂ ನಮ್ಮ ಜೊತೆಗೆ ಬನ್ನಿ)
ಈ ಸಾಲುಗಳು ನೋಟು ರದ್ದತಿ ನಿರ್ಧಾರವನ್ನು ವಿರೋಧಿಸಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟಂತಿತ್ತು.
ಇದಾದ ಬಳಿಕ ಬಜೆಟಲ್ಲಿ ತೆರಿಗೆ ಬಗ್ಗೆ ಪ್ರಸ್ತಾಪಿಸುತ್ತಾ ಮತ್ತೊಂದು ಕವಿತೆಯನ್ನು ಜೇಟ್ಲಿ ಹೇಳಿದರು.
ನಯೀ ದುನಿಯಾ ಹೈ, ನಯಾ ದೌರ್ ಹೈ, ನಯೀ ಹೈ ಉಮಂಗ್| ಕುಚ್ ಥೆ ಪೆಹಲೇ ಕೆ ತರೀಕೆ, ತೋ ಕುಚ್ ಹೈ ಆಜ್ ಕೆ ಡಂಗ್ | ರೋಶನಿ ಆಕೆ ಅಂಧೇರೋಂ ಸೇ ಜೊ ಟಕರಾಯೀ ಹೈ| ಕಾಲೇ ಧನ್ ಕೋ ಭೀ ಬದಲ್ನಾ ಪಡಾ, ಆಜ್ ಅಪ್ನಾ ರಂಗ್||
(ಅರ್ಥ: ಇದೊಂದು ಹೊಸ ಲೋಕ, ಹೊಸ ನಡೆ, ಹೊಸ ಉತ್ಸಾಹ. ಕೆಲವು ಹಳೇ ರೀತಿಗಳಿದ್ದವು, ಇನ್ನು ಕೆಲವು ಈಗಿನ ಹೊಸ ರೀತಿಗಳಾಗಿವೆ. ಹೊಸ ಬೆಳಕೊಂದು ಬಂದು ಕತ್ತಲನ್ನು ಬಡಿದಾಗ, ಕಪ್ಪು ಹಣಕ್ಕೂ ಕೂಡಾ ತನ್ನ ಬಣ್ಣ ಬದಲಾಯಿಸಬೇಕಾಗಿ ಬಂತು).
2017ರ ಬಜೆಟ್ನಲ್ಲಿ 2 ಬಾರಿ ಕವನ ವಾಚಿಸಿದ ಅರುಣ್ ಜೇಟ್ಲಿ ಈ ರೀತಿ ಕವನ ವಾಚನ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಬಜೆಟ್ ಭಾಷಣ ಮಾಡುವಾಗಲೂ ಅವರು ಕವನ ವಾಚನ ಮಾಡಿದ್ದರು.