ಉಡುಪಿ: ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ. ಪರ್ಯಾಯ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಈ ನಡುವೆ ರಾಜ್ಯಕ್ಕೆ ಮಾದರಿಯಾದ ಕೆಲಸವೊಂದನ್ನು ಭಾವೀ ಕೃಷ್ಣಾಪುರ ಮಠ ಮಾಡಿದೆ.
ಸಾಂಕ್ರಾಮಿಕ ಕೊರೊನಾ ಹತೋಟಿಗೆ ತರಲು ಸರ್ಕಾರ ಕಾನೂನು ರೂಪಿಸುತ್ತದೆ. ಜನಪ್ರತಿನಿಧಿಗಳೇ ಅದನ್ನು ಉಲ್ಲಂಘನೆ ಮಾಡುತ್ತಲೇ ಬರುತ್ತಿದ್ದಾರೆ. ಉಡುಪಿ ಕೃಷ್ಣಮಠದ ಭಾವೀ ಪರ್ಯಾಯ ಕೃಷ್ಣಾಪುರ ಮಠ ಮಾದರಿ ಕೆಲಸ ಮಾಡಿದೆ. ಐದು ಸಾವಿರ ಜನರ ಪಾದಯಾತ್ರೆ ರದ್ದು ಮಾಡಿ, 285 ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಮಾಡಿದೆ.
ಉಡುಪಿ ನಗರದ ಜೋಡುಕಟ್ಟೆಯಿಂದ ಹೊರೆ ಕಾಣಿಕೆ ಮೆರವಣಿಗೆ ಆರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿ ತರಕಾರಿ ದಿನಸಿ ವಸ್ತುಗಳನ್ನು ಮಠಕ್ಕೆ ಕಾಣಿಕೆಯಾಗಿ ಕೊಡುತ್ತಾರೆ. ಈ ಬಾರಿ ಐದು ಸಾವಿರಕ್ಕಿಂತ ಹೆಚ್ಚು ಜನ ಪಾದಯಾತ್ರೆಯ ಮೂಲಕ ಹೊರೆಕಾಣಿಕೆಗಳನ್ನು ಸಲ್ಲಿಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವಿಪರೀತವಾಗಿ ಹರಡುತ್ತಿರುವುದರಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ. ವಾಹನಗಳ ಮೂಲಕ ಮಾತ್ರ ಹೊರಕಾಣಿಕೆ ಕೃಷ್ಣಮಠಕ್ಕೆ ತಲುಪಿಸಲಾಗಿದೆ. ಇದನ್ನೂ ಓದಿ: ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸರ ಅಶಿಸ್ತು – 6 ಅಧಿಕಾರಿಗಳ ಅಮಾನತು
ಜಗತ್ತಿಗೆ ಕೊರೊನಾ ಸಾಂಕ್ರಾಮಿಕ ಮಹಾಮಾರಿ ಅಪ್ಪಳಿಸಿದೆ. ವರ್ಷದ ಹಿಂದೆಯೇ ನಾವು ಒಂದು ನಿರ್ಧಾರವನ್ನು ಮಾಡಿದ್ದೆವು. ಪರ್ಯಾಯ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ನಿಯಮಗಳು ಹೇಗಿರುತ್ತದೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಪ್ರದಾಯಕ್ಕೆ ಚ್ಯುತಿ ಬರದ ಹಾಗೆ ಕಾರ್ಯಕ್ರಮಗಳನ್ನು ರೂಪಿಸಬೇಕು, ಅದರಂತೆ ಕಾರ್ಯಕ್ರಮ ಮಾಡಿಕೊಂಡು ಹೋಗುತ್ತಿದ್ದೇವೆ. ದೇವರು ಅನುಗ್ರಹಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿದೆ. ಅದ್ದೂರಿತನಕ್ಕೆ ಒತ್ತುಕೊಡದೆ, ಸಾಂಪ್ರದಾಯಿಕ ಪರ್ಯಾಯ ನಡೆಸುತ್ತೇವೆ ಎಂದು ಪಬ್ಲಿಕ್ ಟಿವಿಗೆ ಕೃಷ್ಣಾಪುರ ಮಠಾಧೀಶ ಭಾವೀ ಪರ್ಯಾಯ ಪೀಠಾಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: 1 ಕಿ.ಮೀ ಓಡಿ ಕಳ್ಳನನ್ನು ಹಿಡಿದ ಮಂಗಳೂರು ಪೊಲೀಸ್ ವೀಡಿಯೋ ವೈರಲ್
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಹೋದರ ಸಂಸ್ಥೆಗಳ ವತಿಯಿಂದ ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಿಂದ ಹೊರೆಕಾಣಿಕೆ ಸಂಗ್ರಹಿಸಲಾಗಿದೆ. ಉಡುಪಿ ಕೃಷ್ಣ ಮಠಕ್ಕೆ ಸಲ್ಲಿಕೆ ಮಾಡಲಾಯಿತು. ಧರ್ಮಸ್ಥಳ ಸಂಸ್ಥೆಯ ಪ್ರಮುಖರು ಸಂಘಟನೆಯ ಜವಾಬ್ದಾರಿ ಇರುವ ಪದಾಧಿಕಾರಿಗಳು, ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಹಿಳಾ ತಂಡಗಳು ಮೆರವಣಿಗೆ ಸಂದರ್ಭದಲ್ಲಿ ವಾಹನಗಳಲ್ಲೇ ಕುಳಿತು ಭಜನೆ ಹಾಡಿದರು.