– ರಾಷ್ಟ್ರಪತಿ ಆಡಳಿತ ತಪ್ಪಿಸಲು ವಿಜಯ್ ಬೇಷರತ್ ಬೆಂಬಲ
ಚೆನ್ನೈ: ತಮಿಳುನಾಡಿನ (Tamil Nadu) ರಾಜಕೀಯ ಭೂಪಟದಲ್ಲಿ ದಶಕಗಳ ಕಾಲದ ಎರಡು ಪಕ್ಷಗಳ ಆಡಳಿತದ ನಂತರ, ಇದೀಗ ಹೊಸ ಮೈತ್ರಿ ಪರ್ವ ಆರಂಭವಾಗಿದೆ. ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಸಂಸದ ತೋಲ್ ತಿರುಮಾವಲವನ್(Thol Thirumavalavan) ನೇತೃತ್ವದ ವಿದುತಲೈ ಚಿರುತೈಗಲ್ ಕಟ್ಚಿ (VCK) ಬೇಷರತ್ ಬೆಂಬಲ ಘೋಷಿಸಿದರೂ ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುವುದಾಗಿ ತಿಳಿಸಿದೆ.
ಶನಿವಾರ ಚೆನ್ನೈನಲ್ಲಿರುವ ವಿಸಿಕೆ ಪ್ರಧಾನ ಕಚೇರಿಯಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರಿಗೆ ಬೆಂಬಲ ಪತ್ರ ಹಸ್ತಾಂತರಿಸಿದ ನಂತರ ತಿರುಮಾವಲವನ್ ಈ ಘೋಷಣೆ ಮಾಡಿದ್ದಾರೆ.
ತಮ್ಮ ಪಕ್ಷದ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ತಿರುಮಾವಲವನ್, ಬೆಂಬಲದ ಹಿಂದೆ ಎರಡು ಪ್ರಮುಖ ಉದ್ದೇಶಗಳಿವೆ ಎಂದು ತಿಳಿಸಿದ್ದಾರೆ. ವಿಜಯ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ವಿಸಿಕೆ ಯಾವುದೇ ರೀತಿಯಲ್ಲೂ ತಡೆಯೊಡ್ಡಬಾರದು ಎನ್ನುವುದು ಪಕ್ಷದ ಆಶಯ. ರಾಜ್ಯದಲ್ಲಿ ರಾಜಕೀಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಕೇಂದ್ರವು ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಪ್ಪಿಸಲು ಈ ನಿರ್ಧಾರ ಅಗತ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ
Press Meet… pic.twitter.com/caIIoYpptN
— Thol. Thirumavalavan (@thirumaofficial) May 9, 2026
ತಮ್ಮ ಈ ನಡೆಯು ಡಿಎಂಕೆ ಜೊತೆಗಿನ ಮೈತ್ರಿಗೆ ಧಕ್ಕೆ ತರುವುದಿಲ್ಲ ಎಂದು ತಿರುಮಾವಲವನ್ ಸ್ಪಷ್ಟಪಡಿಸಿದ್ದಾರೆ. “ನಾವು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದಲ್ಲಿ ಮುಂದುವರಿಯುತ್ತೇವೆ. ಈ ನಿರ್ಧಾರದ ಬಗ್ಗೆ ಮೊದಲೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರಿಗೆ ತಿಳಿಸಿದ್ದು, ಅವರು ಈ ನಿರ್ಧಾರವನ್ನು ಮೆಚ್ಚಿದ್ದಾರೆ” ಎಂದು ಅವರು ಹೇಳಿದರು.
ಸಂಪುಟ ದರ್ಜೆಯ ಸ್ಥಾನಗಳಿಗಾಗಿ ವಿಸಿಕೆ ಹಠ ಹಿಡಿಯದೆ, ಕೇವಲ ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿದೆ. “ಸಂಪುಟ ಸ್ಥಾನಕ್ಕಾಗಿ ನಾವು 30 ವರ್ಷಗಳ ಕಠಿಣ ಪರಿಶ್ರಮದಿಂದ ಗಳಿಸಿದ ರಾಜಕೀಯ ವಿಶ್ವಾಸಾರ್ಹತೆಯನ್ನು ಬಲಿ ಕೊಡಬಾರದು” ಎಂದು ತಿರುಮಾವಲವನ್ ತಮ್ಮ ಪಕ್ಷದ ಸದಸ್ಯರಿಗೆ ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ಜೊತೆ ಮೈತ್ರಿಯಲ್ಲಿ ಮುಂದುವರಿಯುತ್ತಿರುವ ಕಾರಣ ವಿಸಿಕೆ ಶಾಸಕರು ವಿಜಯ್ ಸರ್ಕಾರದಲ್ಲಿ ಮಂತ್ರಿಯಾಗುವುದಿಲ್ಲ. ಹೊರಗಡೆಯಿಂದ ಮಾತ್ರ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ.

