ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ (Asaram Bapu) ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಏಮ್ಸ್ ಆಸ್ಪತ್ರೆ ವರದಿಯಲ್ಲಿ ಆಸ್ಪತ್ರೆ ದಾಖಲಿಸುವುದು ಬೇಕಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ವರದಿಯಲ್ಲಿರುವಂತೆ ಸೂಕ್ತ ಕೇರ್ ಟೇಕರ್ ನೇಮಕಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ. ಈ ಮೂಲಕ ದಿನದ 24 ಗಂಟೆಗಳ ಕಾಲ ವೈದ್ಯಕೀಯ ನೆರವು ನೀಡಲು ಅವರು ಕೇರ್ ಟೇಕರ್ನ್ನು ನೇಮಿಸಿಕೊಳ್ಳಲು ನ್ಯಾಯಾಲಯ ಅವಕಾಶ ನೀಡಿದೆ. ಇದನ್ನೂ ಓದಿ: 2013ರ ರೇಪ್ಕೇಸ್: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ


ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಪಿ ಬಿ ವರಾಳೆ ಅವರ ಪೀಠ ಅಸರಾಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಬಾಕಿ ಉಳಿಸಿಕೊಂಡು ಈ ಆದೇಶ ನೀಡಿದೆ. ಅಕಸ್ಮಾತ್ ಅಪರಾಧಿಯ ಆರೋಗ್ಯ ಸ್ಥಿತಿ ಹದಗೆಟ್ಟರೆ ತುರ್ತು ವಿಚಾರಣೆಗೆ ಕೋರುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಅಸರಾಂ ಆರೋಗ್ಯದ ಸ್ಥಿತಿ ನಿರ್ಣಯಿಸಲು ಜುಲೈ 21 ರಂದು ಸುಪ್ರೀಂ ಕೋರ್ಟ್ AIIMS ಗೆ ನಿರ್ದೇಶಿಸಿತ್ತು. ಅದರಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ರಚಿಸಿದ್ದ ವೈದ್ಯಕೀಯ ಮಂಡಳಿಯು ಅಸಾರಾಂಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ನಿರಂತರ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ವರದಿ ನೀಡಿತ್ತು. ಈ ವರದಿಯ ಅನ್ವಯ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನನ್ನು ನಿರಾಕರಿಸಿದೆ.
ಆಸಾರಾಂ ತನ್ನ ಆಶ್ರಮದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಏಪ್ರಿಲ್ 25, 2018 ರಂದು ವಿಚಾರಣಾ ನ್ಯಾಯಾಲಯವು ದೋಷಿ ಎಂದು ಘೋಷಿಸಿತ್ತು. ಅದರಂತೆ ಐಪಿಸಿ, ಪೋಕ್ಸೋ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ರಾಜಸ್ಥಾನ (Rajasthan) ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
2013ರ ಈ ಪ್ರಕರಣದಲ್ಲಿ ಅಸಾರಾಂ ಬಾಪುವಿನ ಪತ್ನಿ ಸೇರಿ ಪ್ರಕರಣದ ಆರೋಪಿಗಳಾಗಿದ್ದ 6 ಮಂದಿಯನ್ನ ಖುಲಾಸೆಗೊಳಿಸಲಾಗಿತ್ತು. ಪೂರಕ ಸಾಕ್ಷ್ಯಾಧಾರ ಇಲ್ಲದ ಕಾರಣ ಐವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಇದನ್ನೂ ಓದಿ: ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

