ತುಮಕೂರು: ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕಾಗಲ್ಲ ಎಂಬ ಸಹಕಾರಿ ಸಚಿವ ಕೆ.ಎನ್.ರಾಜಣ್ಣ (KN Rajanna) ರ ದರ್ಪದ ಮಾತು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ತುಮಕೂರಿನಲ್ಲಿ ನಡೆದ ವಾಲ್ಮಿಖಿ ಸಮುದಾಯದ ಅಭಿನಂದನಾ ಸಮಾವೇಶದಲ್ಲಿ ಕೆ.ಎನ್. ರಾಜಣ್ಣ ಮಾಡಿದ್ದ ಅಬ್ಬರದ ಭಾಷಣದ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ
ರಾಜಣ್ಣ ಹೇಳಿದ್ದೇನು..?: ತುಮಕೂರು (Tumakuru) ಜಿಲ್ಲೆಯಲ್ಲಿ ನನ್ನನ್ನು ಎದುರು ಹಾಕೊಂಡು ಯಾವನಾದ್ರೂ ಗೆದ್ದು ತೋರಿಸಲಿ. ಅವನು ಯಾವ ಪಾರ್ಟಿಯವನು ಬೇಕಾದರೆ ಆಗಲಿ. ಎಲ್ಲ ಪಾರ್ಟಿಯವರು ನನಗೆ ವಿಶ್ವಾಸದಿಂದ ಇರಲೇಬೇಕು. ತುಮಕೂರು ಜಿಲ್ಲೆಯಲ್ಲಿ ಗೆದ್ದ 11 ಕ್ಷೇತ್ರದ ಶಾಸಕರೂ ನನ್ನೊಂದಿಗೆ ವಿಶ್ವಾಸದಿಂದ ಇದ್ದವರೇ. ಜಿಲ್ಲೆಯಲ್ಲಿ ಗೆದ್ದಂತಹ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ (JDS) ಎಲ್ಲಾ ಶಾಸಕರು ನನ್ನೊಂದಿಗೆ ವಿಶ್ವಾಸದಿಂದ ಇದ್ದವರು. ಹಾಗಾಗಿ ಅವರೆಲ್ಲಾ ಈಗ ಗೆದ್ದಿದ್ದಾರೆ ಎಂದಿದ್ದಾರೆ.
ಕೆ.ಎನ್.ರಾಜಣ್ಣರನ್ನು ಎದರುಹಾಕೊಂಡು 2018 ಚುನಾವಣೆಯಲ್ಲಿ ಕಾಂಗ್ರೆಸ್ (Congress) ನ ಮಾಜಿ ಸಚಿವ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ತಿಪಟೂರು ಶಾಸಕ ಕೆ.ಷಡಕ್ಷರಿ ಸೋತಿದ್ದರು. ಇನ್ನು 2013 ರಲ್ಲಿ ಪರಾಭವಗೊಂಡಿದ್ದ ಜಿ.ಪರಮೇಶ್ವರ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸಖ್ಯ ಬೆಳೆಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿ ನನ್ನ ಉಸಾಬರಿಗೆ ಯಾರೂ ಬರಬೇಡಿ ಎಂದು ವೇದಿಕೆ ಮೂಲಕ ಕೆ.ಎನ್.ರಾಜಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.